ಕಾಂಗ್ರೆಸ್ ಗೆಲುವಿಗೆ ಸಹಕರಿಸಿದರೆ ವಿಶೇಷ ಪ್ಯಾಕೇಜ್: ಈಶ್ವರ್ ಖಂಡ್ರೆ ಭರವಸೆ

ಚನ್ನರಾಯಪಟ್ಟಣ: ಪುರಸಭೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ಪಟ್ಟಣದ ಮತದಾರರು ಸಹಕರಿಸಿದರೆ ವಿಶೇಷ ಪ್ಯಾಕೇಜ್ ಮೂಲಕ ಅನುದಾನ ನೀಡಿ ನಗರವನ್ನು ಅಭಿವೃದ್ಧಿ ಮಾಡಲಾ ಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭರವಸೆ ನೀಡಿದರು.

ಸ್ಥಳೀಯ ಚುನಾವಣೆ ಹಿನ್ನೆಲೆ ಪಟ್ಟಣ ದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಪೌರಾಡಳಿತ ಸಚಿವನಾಗಿದ್ದಾಗ ಇಲ್ಲಿನ ಪುರಸಭೆಗೆ ನಗರೋತ್ಥಾನ ಯೋಜನೆ ಮೂಲಕ 7.50 ಕೋಟಿ ರೂ. ಅನುದಾನ ನೀಡಿದ್ದೆ. ಈಗ ವಾರ್ಡ್‍ನಲ್ಲಿ ರಸ್ತೆ, ಒಳ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದು ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದರು.

ಎಸ್ಸಿ, ಎಸ್ಟಿ ಬಡಾವಣೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಪೌರಾಡಳಿತ ಸಚಿವರು ಯೋಜನೆ ತಯಾರಿಸಿದ್ದಾರೆ. ಪಟ್ಟಣ ಪುರಸಭೆಯಲ್ಲಿ 20 ವಾಡ್‍ನ ಅಭ್ಯರ್ಥಿಗಳ ಗೆಲುವಿಗೆ ಮತದಾರರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಕ್ಷೇತ್ರದ ಜನತೆ ತಾಲೂಕು ಪಂಚಾಯಿತಿಯನ್ನು ಕಾಂಗ್ರೆಸ್ ತೆಕ್ಕೆಗೆ ನೀಡಿದಂತೆ ಪುರಸಭೆ ಆಡಳಿತ ನಡೆಸಲು ಕಾಂಗ್ರೆಸ್‍ಗೆ ಅಧಿಕಾರ ನೀಡಬೇಕು. ಸಿದ್ಧ ರಾಮಯ್ಯ ಆಡಳಿತ ಅವಧಿಯಲ್ಲಿ ಘೋಷಣೆ ಮಾಡಿದ್ದ ಎಲ್ಲಾ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸುತ್ತಿದೆ ಎಂದರು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮುಖಂಡರಾದ ರಾಮಚಂದ್ರ, ವಿಜಿಕುಮಾರ್, ಬಿ.ಶಿವರಾಂ, ಜಿಪಂ ಅಧ್ಯಕ್ಷೆ ಶ್ವೇತಾ, ಜಿಲ್ಲಾಧ್ಯಕ್ಷ ಮಂಜುನಾಥ್, ಪೂರ್ಣಿಮಾ ವೆಂಕಟೇಶ್ ಕಾರ್ಯಕರ್ತರು, ಅಭ್ಯರ್ಥಿಗಳು ಇದ್ದರು.