ಅಕ್ರಮವಾಗಿ ಸಾಗಿಸುತ್ತಿದ್ದ ತೇಗದ ಮರ ವಶ

ಹನೂರು:  ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ತೇಗದ ಮರಗಳನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಪಟ್ಟಣದ ಸಮೀಪ ನಡೆದಿದೆ.

ಮೈಸೂರಿನಿಂದ ಹನೂ ರಿಗೆ ಅಕ್ರಮವಾಗಿ ಮರ ಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ವಲಯ ಅರಣ್ಯಾಧಿಕಾರಿ ರುಕಿಯಾ ಪರ್ವಿನ್ ವಾಹನ ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಬೇವು ಹಾಗೂ ತೇಗದ ಮರಗಳಿರುವುದು ಕಂಡು ಬಂದಿದೆ. ವಿಚಾರಿಸಿದಾಗ ಬೇವಿನ ಮರ ಖರೀದಿಸಿರುವುದಕ್ಕೆ ರಶೀದಿ ಇದ್ದು, ತೇಗದ ಮರಗಳಿಗೆ ರಶೀದಿ ಇಲ್ಲದಿರುವುದು ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

9 ತೇಗದ ಮರದ ತುಂಡುಗಳನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು, ಡಿಎಫ್‍ಓ ಏಡುಕುಂಡಲು ಅವರ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಫಾರೆಸ್ಟರ್‍ಗಳಾದ ಸಾಲನ್, ತೀರ್ಥಪ್ರಸಾದ್ ಪಾಲ್ಗೊಂಡಿದ್ದರು.