ತಹಸೀಲ್ದಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಹುಣಸೂರು, ಜು.17(ಕೆಕೆ)- ಸಾರ್ವ ಜನಿಕರ ಕುಂದುಕೊರತೆ ಬಗ್ಗೆ ಗಮನ ಹರಿಸದೆ ಭ್ರಷ್ಟಾಚಾರದಲ್ಲಿ ತೊಡಗಿರುವ ತಹಸೀ ಲ್ದಾರ್ ಬಸವರಾಜ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿ ಉಪವಿಭಾ ಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ತಹಸೀಲ್ದಾರ್ ಬಸವರಾಜು ಕಳೆದ ಎರಡೂವರೆ ವರ್ಷಗಳಿಂದ ಸಾರ್ವ ಜನಿಕರ ಕುಂದುಕೊರತೆಗಳ ಬಗ್ಗೆ ಗಮನ ಹರಿಸದೇ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕ ಸೇವೆಯನ್ನೇ ಮರೆತಿದ್ದಾರೆ. ಅಲ್ಲದೇ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳು ಎಷ್ಟೇ ಮನವಿ ಸಲ್ಲಿಸಿದ್ದರೂ, ಸಮಸ್ಯೆ ಗಳನ್ನು ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ತಹಸೀಲ್ದಾರ್ ಬಸವರಾಜು ಅವರು ಸಾರ್ವಜನಿಕರ ಅಹವಾಲು ಆಲಿಸಲು ಯಾವುದೇ ತುರ್ತು ಸಂದರ್ಭಗಳಿಲ್ಲದಿದ್ದರೂ ಕಚೇರಿಯಲ್ಲಿರುವುದಿಲ್ಲ. ಹಿಂದೆ ಭೂ ಅಕ್ರಮ ಸಕ್ರಮ ಸಭೆಗಳಲ್ಲಿ ಸಾಗುವಳಿ ಮಂಜೂರಾಗದಿದ್ದರೂ ಕೂಡ ತನಗೆ ಸಮಯವಿಲ್ಲ ಎಂದು ಕಾರಣ ನೀಡಿ ರೈತ ರನ್ನು ಅಲೆದಾಡಿಸಿದ್ದಾರೆ ಹಾಗೂ ದುರಸ್ತಿ ಪ್ರಕ್ರಿಯೆಯಲ್ಲಿ ತನ್ನ ಹಿಂಬಾಲಕರಿಂದ ಬಂದ ಕಡತಗಳಿಗೆ ಮಾತ್ರ ಆದ್ಯತೆ ನೀಡು ತ್ತಿದ್ದಾರೆ ಎಂದು ದೂರಿದರು.
ದಲಿತ ಸಂಘಟನೆ, ರೈತ ಸಂಘ ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸದ ಭ್ರಷ್ಟ ಅಧಿಕಾರಿಯನ್ನು ವಜಾಗೊಳಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಅವರ ಮನೆ ಮುಂದೆ ಧರಣಿ ಮಾಡುವು ದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಕಾರ್ಯಾಧ್ಯಕ್ಷ ಮಂಜುನಾಥ ಅರಸ್, ಗೌರವ ಅಧ್ಯಕ್ಷ ರಾಮಕೃಷ್ಣೇಗೌಡ, ಖಜಾಂಚಿ ಜಯಣ್ಣ, ಪದಾಧಿಕಾರಿಗಳಾದ ವಿಷಕಂಠಪ್ಪ, ನಾಗೇಗೌಡ, ರಾಮೇಗೌಡ, ದಸಂಸ ಜಿಲ್ಲಾ ಸಂಚಾಲಕ ಪುಟ್ಟಸ್ವಾಮಿ, ತಾಲೂಕು ಸಂಚಾಲಕ ರಾಮಕೃಷ್ಣ, ನಗರ ಸಂಚಾಲಕ ರಾಜು, ದಸಂಸ ಮುಖಂಡ ರಾದ ಕಾಂತರಾಜು, ಸಿದ್ದೇಶ, ಗಜೇಂದ್ರ, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಜೆ.ಮಹದೇವ್, ತಾಲೂಕು ಸಿಪಿಎಂ ಕಾರ್ಯ ದರ್ಶಿ ಬಸವರಾಜು, ನಗರಸಭಾ ಮಾಜಿ ಸದಸ್ಯ ಹೆಚ್.ಎಸ್.ವರದರಾಜು ಇದ್ದರು.