ರಾಷ್ಟ್ರಪತಿಗಳು ಧರಿಸಿದ್ದು ಮೈಸೂರು ರೇಷ್ಮೆ ಸೀರೆ

ಮೈಸೂರು: ಮೈಸೂರು ರೇಷ್ಮೆ ಸೀರೆ ಧರಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಾಡಿನ ವಿಶೇಷ ಗೌರವಕ್ಕೆ ಪಾತ್ರರಾದರು. ಚಿನ್ನದ ಝರಿವುಳ್ಳ ಬಿಳಿ ರೇಷ್ಮೆ ಸೀರೆ ಧರಿಸಿ ಆಗಮಿಸಿದ್ದ ರಾಷ್ಟ್ರಪತಿಗಳು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಿದರು. ಅವರಿಗಾಗಿಯೇ ವಿಶೇಷವಾಗಿ ಮೈಸೂರಿನ ಸಿಲ್ಕ್ ಫ್ಯಾಕ್ಟರಿಯಲ್ಲಿ ನೇಯ್ದ ಸೀರೆ ಇದು. ಸೆ.22ರಂದು ದೆಹಲಿಗೆ ತೆರಳಿ ರಾಷ್ಟ್ರಪತಿ ಭವನ ದಲ್ಲಿ ಅವರಿಗೆ ಆಹ್ವಾನ ನೀಡಿದ್ದಾಗ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದ ನಿಯೋಗ, ಫಲತಾಂಬೂಲದೊಂದಿಗೆ 70,000 ರೂ. ಬೆಲೆಯ ಈ ರೇಷ್ಮೆ ಸೀರೆಯನ್ನು ದ್ರೌಪದಿ ಮುರ್ಮು ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಅಪ್ಪಟ ರೇಷ್ಮೆ ಮತ್ತು ಚಿನ್ನದ ಎಳೆಗಳನ್ನು ಬಳಸಿ ನೇಯ್ಗೆ ಮಾಡಲಾಗಿದ್ದ, ಅವರ ಅಚ್ಚು ಮೆಚ್ಚಿನ ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಸಮರ್ಪಿಸಲಾಗಿತ್ತು. ಅದೇ ಸೀರೆಯನ್ನು ಧರಿಸಿ ಮೈಸೂರಿಗೆ ಬಂದು ನವರಾತ್ರಿ ಉತ್ಸವ ಉದ್ಘಾಟಿ ಸಿದ ಮುರ್ಮು, ನಾಡಿನ ಜನರಲ್ಲಿ ಸಂತಸ ಹಾಗೂ ಹೆಮ್ಮೆ ತಂದರು.