ಮೈಸೂರು, ಏ.27(ಪಿಎಂ)- ಲಾಕ್ಡೌನ್ ಅವಧಿಯಲ್ಲಿ ದೂರದ ಬೆಂಗಳೂರಿಗೆ ತೆರಳಿ ಔಷಧ ತರಲು ಸಾಧ್ಯವಾಗದೇ ಕಂಗಾಲಾ ಗಿದ್ದ ಮೈಸೂರಿನ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಯುವಕರೊಬ್ಬರು ನೆರವಾ ಗಿದ್ದಾರೆ. ಲಾಕ್ಡೌನ್ನ ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಸ್ವಂತ ವಾಹನಗಳಲ್ಲಿ ಸಂಚರಿಸಲು ಅನುಮತಿ ಕಡ್ಡಾಯ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೂರದ ಬೆಂಗಳೂರಿಗೆ ತೆರಳಿ ಔಷಧ ತರುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು. ಅವರು ತಡೆದಲ್ಲೆಲ್ಲಾ ಸಮಜಾಯಿಷಿ ನೀಡಿ ಪೊಲೀಸ್ ಅನುಮತಿಯ ಪಾಸ್ ತೋರಿಸಿ ಮುಂದೆ ಸಾಗಬೇಕು.
ಈ ರೀತಿ ಸನ್ನಿವೇಶದಲ್ಲಿ ಮೈಸೂರಿನ ಯುವ ಸಮಾಜ ಸೇವಾ ಕಾರ್ಯಕರ್ತ ಎಂ.ಎನ್.ಮಹದೇವ್ ಪ್ರಸಾದ್ (ಪ್ರಸಾದಿ) ಎಂಬು ವವರು ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಬೆಂಗಳೂರಿನಿಂದ ಔಷಧ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ಔಷಧ ತರಲು ಬೆಂಗಳೂರಿಗೆ ತೆರಳಲು ಅನುಮತಿಗಾಗಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬಂದಿದ್ದರು. ಇದೇ ವೇಳೆ ತಾವೂ ಬೆಂಗಳೂರಿಗೆ ಹೋಗಲು ಅನುಮತಿ ಕೋರಲು ಬಂದಿದ್ದ ಎಂ.ಎನ್.ಮಹದೇವ್ಪ್ರಸಾದ್, ಔಷಧ ತಂದು ಕೊಡುವ ಜವಾಬ್ದಾರಿ ವಹಿಸಿಕೊಂಡರು.
ರೋಗಿಯ ಬಂಧುಗಳಿಗೆ ಅಭಯ ನೀಡಿದ ಎಂ.ಎನ್. ಮಹ ದೇವ್ಪ್ರಸಾದ್, ಅದೇ ದಿನ ತಾವು ಬೆಂಗಳೂರಿಗೆ ತೆರಳುತ್ತಿದ್ದು, ಲಭ್ಯವಾಗುವ ಅಂಗಡಿಯಿಂದ ಔಷಧಿ ಖರೀದಿಸಿ ತಂದು ಕೊಡುವ ಭರವಸೆ ನೀಡಿದ್ದರು. ಅದರಂತೆ ಬೆಂಗಳೂರಿಗೆ ತೆರಳಿ ಔಷಧಿ ತಂದ ಅವರು, ಮುಖಂಡ ಉಮೇಶ್ ಜೊತೆ ಲಕ್ಷ್ಮೀಪುರಂ ಠಾಣೆಗೆ ತೆರಳಿ ಔಷಧ ಒಪ್ಪಿಸಿ, ಲಾಕ್ಡೌನ್ ಸಂದಿಗ್ಧ ಸ್ಥಿತಿಯಲ್ಲಿ ಕಂಗಾಲಾಗಿದ್ದ ಕ್ಯಾನ್ಸರ್ ರೋಗಿಗೆ ನೆರವಾಗಿದ್ದಾರೆ.