ಆನೆ ಚೌಕೂರು ಅರಣ್ಯದಲ್ಲಿ ಶ್ರೀಗಂಧ ಕಳವಿಗೆತ್ನಿಸಿದ ಮೂವರ ಬಂಧನ

ಪಿರಿಯಾಪಟ್ಟಣ:  ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಸಿಬ್ಬಂದಿ ಮಾಲು ಸಮೇತ ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.

ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗಿರಿಜನ ಹಾಡಿಯ ಸ್ವಾಮಿ, ನಾಗ, ಮತ್ತು ಮನುಗನಹಳ್ಳಿ ಗ್ರಾಮದ ಮಂಜು ಬಂಧಿತ ರಾಗಿದ್ದು, ತಾಲೂಕಿನ ಆನೆಚೌಕೂರು ಅರಣ್ಯ ವಲಯದಲ್ಲಿ ಭಾನುವಾರ ಆನೆಚೌಕೂರು ಅರಣ್ಯ ವಲಯ ಅಂಕಣ 5 ರ ಕುದುರೆ ಬಿದ್ದಹಳ್ಳಿ ಬಳಿಯ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಣೆ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾದ ಬೈಕ್, 2 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿರಿಯಾಪಟ್ಟಣ ವಲಯ ಅರಣ್ಯಾ ಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಬಂಧಿತರಿಂದ 75 ಕೆ.ಜಿಯ 13 ಗಂಧದ ಮರದ ತುಂಡುಗಳನ್ನು ವಶಪಡಿಸಿ ಕೊಂಡಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾ ಚರಣೆ ಯಲ್ಲಿ ಟಿ.ಆರ್.ಎಫ್.ಒ.ನಂಜಪ್ಪ, ಗಾರ್ಡ್ ಗಳಾದ ಶಂಕರಪ್ಪ, ವೀರೇಶ್ ಅಂಗಡಿ, ಧನಂಜಯ, ಮತ್ತು ಸಿಬ್ಬಂದಿ ಗಳು ಪಾಲ್ಗೊಂಡಿದ್ದರು.