ಅಪಘಾತದಲ್ಲಿ ಮೂವರ ಬಲಿ: ಕಾರು ಕಂಪನಿ ಸೇಲ್ಸ್ ಮ್ಯಾನೇಜರ್ ವಿರುದ್ಧ ಕೇಸ್ ದಾಖಲು

ಮೈಸೂರು, ಡಿ.12-ಅಪ್ರಾಪ್ತನೋರ್ವ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ಎನ್.ಆರ್. ಸಂಚಾರ ಪೊಲೀಸರು ಮೈಸೂರಿನ ಹಿನಕಲ್‍ನಲ್ಲಿರುವ ಕಾರು ಕಂಪನಿಯೊಂದರ ಸೇಲ್ಸ್ ಮ್ಯಾನೇಜರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.

ವೋಲ್ಕ್ಸ್‍ವೊಗನ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ವಿರುದ್ಧ ಅಪ್ರಾಪ್ತನಿಗೆ ಚಾಲನೆ ಮಾಡಲು ಕಾರು ನೀಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕರಿಗೆ ಟ್ರಯಲ್ ನೀಡಲು ತಂದಿದ್ದ ಕಾರನ್ನು ಇವರು ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ನೀಡಿದ್ದರು ಎಂದು ಆರೋಪಿಸಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ದಂಡಿ ಮಾರಮ್ಮ ದೇವಸ್ಥಾನದ ಬಳಿ ಗುರುವಾರ ರಾತ್ರಿ ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ಎದುರಿಗೆ ಬಂದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿದ್ದನ್ನು ಸ್ಮರಿಸಬಹುದು.