ಪಂಚಮಸಾಲಿ ಹಾಗೂ ಇತರೆ ಪಂಗಡಕ್ಕೆ 2ಎ ಮೀಸಲಾತಿಗೆ ಮತ್ತೆ ಡಿಸಿಗೆ ಮನವಿ

ಮೈಸೂರು, ಸೆ.15(ಎಸ್‍ಪಿಎನ್)- ಲಿಂಗಾಯತ ಪಂಚಮ ಸಾಲಿ ಹಾಗೂ ದೀಕ್ಷಾ ಪಂಚಮಸಾಲಿ, ಲಿಂಗಾಯತ ಗೌಡ, ಮಲೆಗೌಡ ಪಂಗಡಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಲಿಂಗಾ ಯತ ಗೌಡ ಮಹಾಸಭಾ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗ ಳೂರಿನವರೆಗೆ 23 ದಿನಗಳು ಬೃಹತ್ ರ್ಯಾಲಿ ಹಮ್ಮಿ ಕೊಂಡು 2ಎ ಮೀಸಲಾತಿಗೆ ಒತ್ತಾಯಿಸಲಾಗಿತ್ತು. ನಂತರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸದನದ ಒಳಗೂ ಈ ಸಂಬಂಧ ಗಮನ ಸೆಳೆದಿದ್ದರು.

ಅಂದಿನ ಮುಖ್ಯಮಂತ್ರಿಗಳು ಮೀಸಲಾತಿ ನೀಡುವುದಾಗಿ ಸದನದಲ್ಲೇ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು ಕೂಡಲೇ ಪಂಚಮಸಾಲಿ ಇತರೆ ಪಂಗಡ ಗಳಿಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಅ.1ರಿಂದ ಸ್ವಾಮೀಜಿ ನೇತೃತ್ವದಲ್ಲಿ ಪುನಃ ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಲಿಂಗಾಯತ ಗೌಡ ಮಹಾಸಭಾ ರಾಜ್ಯಾಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ ಕಾರ್ಯದರ್ಶಿ ಕೇಬಲ್ ಮಹೇಶ್, ರೈತ ಮುಖಂಡ ಮಲ್ಲೇಶ್, ಗೌಡ ಲಿಂಗಾಯತ- ಪಂಚಮಸಾಲಿ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಎ.ಸಿ.ಜಗದೀಶ್ ಇದ್ದರು.