ನಾಳೆ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸುವ ತಾಲೀಮು

ಮೈಸೂರು,ಸೆ.29(ಎಂಟಿವೈ)-ಜಂಬೂಸವಾರಿಗೆ ದಿನಗಣನೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅ.1ರಿಂದ ಗಜಪಡೆ ನಾಯಕ ಅಭಿಮನ್ಯುಗೆ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲು ಉದ್ದೇಶಿಸಲಾಗಿದೆ.

ಸೆ.20ರಿಂದ ಗಜಪಡೆ ನಾಯಕ ಅಭಿಮನ್ಯು, ಪರ್ಯಾಯ ಆನೆಗಳಾದ ಗೋಪಾಲಸ್ವಾಮಿ, ಧನಂಜಯ ಹಾಗೂ ಹೊಸ ಆನೆ ಅಶ್ವತ್ಥಾಮನಿಗೂ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತಿತ್ತು. ಇದೀಗ ಜಂಬೂಸವಾರಿಗೆ 15 ದಿನ ಇರುವು ದರಿಂದ ಅ.1ರಿಂದ ಮರದ ಅಂಬಾರಿ ಹೊರಿಸಿ ತರಬೇತಿ ನೀಡಲಾಗುತ್ತದೆ. ಅ.1ರಂದು ಬೆಳಿಗ್ಗೆ 9.25ರಿಂದ 10.30ರೊಳಗೆ ಮರದ ಅಂಬಾ ರಿಗೆ ಪೂಜೆ ಸಲ್ಲಿಸಿ, ಅಭಿಮನ್ಯುವಿನ ಮೇಲೆ ಕಟ್ಟಿ ತಾಲೀಮು ನಡೆಸಲಾಗುವುದು.

ಭಾರಕ್ಕೆ ವಿನಾಯಿತಿ: ಅರಮನೆಯ ಆವರಣದಲ್ಲಿರುವ ಗಜಪಡೆಗೆ ಭಾರ ಹೊರಿಸುವ ತಾಲೀಮಿನಿಂದ ಬುಧವಾರ ಹಾಗೂ ಗುರುವಾರ 2 ದಿನ ವಿನಾಯ್ತಿ ನೀಡಲಾಗಿದೆ. ಹಾಗೆಯೇ ಆನೆಗಳಿಗೆ ತಾಲೀಮು ಮಾಡಿಸಲಾಗುತ್ತದೆ. ಅರಮನೆ ಆವರಣದಲ್ಲಿಯೇ ಬೆಳಿಗ್ಗೆ ಮತ್ತು ಸಂಜೆ 2 ಬಾರಿ ಸುಮಾರು 7 ಕಿ.ಮೀ. ಅಂತರ ಅವು ಸಾಗಲಿವೆ.