ಎಂಆರ್‌ಸಿ ಆವರಣದಲ್ಲಿ ಗಂಧದ ಮರ ಕಳವಿಗೆ ಯತ್ನ

ಮೈಸೂರು:  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕ್ಲಬ್ (ಎಂಆರ್‌ಸಿ) ಆವರಣದಲ್ಲಿ ಗಂಧದ ಮರ ಕತ್ತರಿಸಿ, ಕಳವು ಮಾಡಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಮರದ ಒಂದು ಬೊಡ್ಡೆ ಯನ್ನು ಮೋಟಾರು ಗರ ಗಸದಿಂದ ಕತ್ತರಿಸಿ, ಮತ್ತೊಂದನ್ನು ಕೊಡಲಿಯಿಂದ ಕತ್ತರಿಸುತ್ತಿದ್ದಾಗ ಶಬ್ದ ಕೇಳಿಸಿದ್ದು, ರಾತ್ರಿ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ನಿಂಗಾ ಚಾರ್ ಮತ್ತು ಪ್ರಕಾಶ್ ಸ್ಥಳಕ್ಕೆ ದೌಡಾಯಿಸಿದಾಗ, ಖದೀಮರು, ಕತ್ತರಿಸಿದ ಮರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಸೆಕ್ಯೂರಿಟಿ ಫೀಲ್ಡ್ ಆಫೀಸರ್ ಶಿವಮಾಧು ಅವರು ಪರಿಶೀಲಿಸಿ, ಎಂಆರ್‌ಸಿ ಆಡಳಿತ ಮಂಡಳಿ ಗಮನಕ್ಕೆ ತಂದರು. ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ ಪೊಲೀಸರು ಅರಣ್ಯಾಧಿಕಾರಿಗಳೊಂ ದಿಗೆ ಸ್ಥಳ ಮಹಜರು ಮಾಡಿದರು ಎಂದು ಎಂಆರ್‌ಸಿ ಕಾರ್ಯದರ್ಶಿ ಅನಂತರಾಜ್ ಅರಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.