ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ತಿ.ನರಸೀಪುರ ಮಾ.12(ಎಸ್‍ಕೆ)- ಗ್ರಾಮ ದೇವತೆ ಹಬ್ಬಕ್ಕೆ ಬಂದಿದ್ದ ಇಬ್ಬರು ಯುವಕರು ಈಜಲು ಹೋಗಿ ನೀರು ಪಾಲಾಗಿರುವ ದುರ್ಘಟನೆ ತಾಲೂಕಿನ ಯಡದೊರೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗದ ಹೊಸಳ್ಳಿ ಗ್ರಾಮದ ಗಿರೀಶ್ ಬಿನ್ ಚಿಕ್ಕಣ್ಣ(27) ಹಾಗೂ ವಿನಯ್‍ಕುಮಾರ್ ಬಿನ್ ರಮೇಶ್(28) ಮೃತಪಟ್ಟ ಯುವಕರು.

ಗ್ರಾಮದ ಸಂಬಂಧಿಕರ ಮನೆಗೆ ಹಬ್ಬ ಕ್ಕೆಂದು ಬಂದಿದ್ದು, ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋದ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶವವನ್ನು ನದಿ ಯಿಂದ ಹೊರ ತೆಗೆದು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆಯ ಸ್ಥಳಕ್ಕೆ ಪಿಎಸ್‍ಐ ಶಬ್ಬೀರ್ ಹುಸೇನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.