ನಂಜನಗೂಡು, ಮೇ ೨೦- ಲಾರಿ ಯನ್ನು ಹಿಂದಿಕ್ಕುವ ಭರದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡು-ಗುAಡ್ಲುಪೇಟೆ ರಸ್ತೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ನAಜನಗೂಡಿನ ಪೇಪರ್ ಬೋಟ್ ಜ್ಯೂಸ್ ಕಾರ್ಖಾನೆಯ ಕಾರ್ಮಿಕರಾದ ಕೂಡ್ಲಾಪುರ ಗ್ರಾಮದ ಸಚಿನ್ ಮತ್ತು ಉತ್ತನ ಹಳ್ಳಿ ಗ್ರಾಮದ ದೊರೆಸ್ವಾಮಿ ಅಪಘಾತದಲ್ಲಿ ಮೃತಪಟ್ಟವರಾಗಿದ್ದು, ಅದೇ ಬೈಕ್ನ ಮತ್ತೊಬ್ಬ ಸವಾರ ರಘು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿವರ: ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಮೂವರು ಕಾರ್ಮಿಕರು ಗುರುವಾರ ಮಧ್ಯಾಹ್ನ ಕೆಲಸ ಮುಗಿಸಿ ಕೊಂಡು ಸಂಜೆ ೪ ಗಂಟೆ ಸುಮಾರಿನಲ್ಲಿ ಒಂದೇ ಬೈಕ್ನಲ್ಲಿ ನಂಜನಗೂಡು ತಾಲೂಕು ಸಿಂಧುವಳ್ಳಿ ಸಮೀಪದ ಹುಣಸ ವಾಳು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್ ಚಾಲನೆ ಮಾಡುತ್ತಿದ್ದ ಸಚಿನ್ ಲಾರಿ ಯೊಂದನ್ನು ಹಿಂದಿಕ್ಕಲು ಪ್ರಯತ್ನಿಸಿ, ಗುಂಡ್ಲುಪೇಟೆ ಕಡೆಯಿಂದ ನಂಜನಗೂಡು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನ ಮುಂಭಾಗ ನಜ್ಜು ಗುಜ್ಜಾಗಿದೆ. ಬೈಕ್ಚಾಲನೆ ಮಾಡುತ್ತಿದ್ದ ಸಚಿನ್ ಮತ್ತು ಆತನ ಹಿಂದೆ ಕುಳಿತಿದ್ದ ದೊರೆಸ್ವಾಮಿ ಮೃತಪಟ್ಟಿದ್ದು, ಇವರಿಬ್ಬರ ಹಿಂದೆ ಕುಳಿತಿದ್ದ ರಘು ತೀವ್ರವಾಗಿ ಗಾಯಗೊಂಡಿದ್ದಾನೆ.
ಅಪಘಾತ ನಡೆದ ಸ್ಥಳದಿಂದ ಸುಮಾರು ೮೦೦ ಮೀಟರ್ ದೂರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ನಂಜನಗೂಡು ಸಂಚಾರ ಠಾಣೆ ಪೊಲೀಸರು, ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ಸಚಿನ್ ಸಹೋದರ ಸಂಜಯ್ ನೀಡಿದ ದೂರಿನ ಮೇರೆಗೆ ಕೆಎಸ್ಆರ್ಟಿಸಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಸಂಚಾರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಾನು ಗುಂಡ್ಲುಪೇಟೆ ಕಡೆಯಿಂದ ನಂಜನಗೂಡು ಕಡೆಗೆ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ರಸ್ತೆ ಕ್ಲಿಯರೆನ್ಸ್ ಇತ್ತು. ಬಸ್ ೮೦ ಕಿ.ಮೀ. ವೇಗದಲ್ಲಿದ್ದು, ಎದುರಿಗೆ ಬರುತ್ತಿದ್ದ ಲಾರಿಯನ್ನು ಹಿಂದಿಕ್ಕಿ ಹಠಾತ್ತನೇ ಮೂವರು ಸವಾರಿ ಮಾಡುತ್ತಿದ್ದ ಬೈಕ್ ಬಸ್ಗೆ ಡಿಕ್ಕಿ ಹೊಡೆಯಿತು ಎಂದು ಬಸ್ನ ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.