ತಿ.ನರಸೀಪುರದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

ತಿ.ನರಸೀಪುರ, ಜು.20(ಎಸ್‍ಕೆ)- ಮೈಸೂರಿನ ಎನ್‍ಟಿಎಂ ಶಾಲೆ ಉಳಿಸಿ ಕೊಂಡು ವಿವೇಕಾ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಎದುರು ಜಮಾಯಿಸಿದ ತಾಲೂಕು ದಲಿತ ಸಂಘ ಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಪ್ರಗತಿಪರ ಚಿಂತಕರ ವೇದಿಕೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ಮಾತನಾಡಿ, ಐತಿ ಹಾಸಿಕ ಹಿನ್ನೆಲೆಯುಳ್ಳ ಎನ್‍ಟಿಎಂ ಮಹಿಳಾ ಶಾಲೆ ಉಳಿಸಿಕೊಂಡು ವಿವೇಕಾ ಸ್ಮಾರಕ ನಿರ್ಮಿಸಿ. 1880ರ ದಶಕದಲ್ಲಿ ಮಹಾ ರಾಣಿಯಾಗಿದ್ದ ವಾಣಿವಿಲಾಸ ನಂಜಮ್ಮಣ್ಣಿ ಅವರು ಶಿಕ್ಷಣದಿಂದ ವಂಚಿತರಾಗಿದ್ದ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ತೆರೆದರು. ಆದರೆ ಇದೀಗ ಶಾಲೆ ಜಾಗದಲ್ಲಿ ಸ್ಮಾರಕ ನಿರ್ಮಿಸಲು ಮುಂದಾ ಗಿರುವುದು ಸರಿಯಲ್ಲ. ಎನ್‍ಟಿಎಂ ಶಾಲೆ ನಡೆಸಲು ಯಾವುದೇ ಹಸ್ತಕ್ಷೇಪವಾಗದಂತೆ ವಿವೇಕಾ ಸ್ಮಾರಕ ನಿರ್ಮಿಸಿ ಶಾಲೆ ಉಳಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಆರ್.ಶಶಿಕಾಂತ್, ಕರ್ನಾಟಕ ರಾಜ್ಯ ರೈತ ಸಂಘದ(ಸಾಮೂಹಿಕ ನಾಯಕತ್ವ) ಜಿಲ್ಲಾ ಗೌರವಾಧ್ಯಕ್ಷ ಕೆ.ಜೆ.ಶಿವಪ್ರಸಾದ್, ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಜನ ಜಾಗೃತಿ ವೇದಿಕೆ ಸದಸ್ಯ ಕೆ.ಎನ್.ಪ್ರಭುಸ್ವಾಮಿ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಯರಗನಹಳ್ಳಿ ಸುರೇಶ್, ಕೆಬ್ಬೆಹುಂಡಿ ನಿಂಗರಾಜು, ಕುಕ್ಕೂರು ರಾಜು, ಕೆಂಪಯ್ಯನಹುಂಡಿ ರಾಜು, ನಂಜುಂಡಯ್ಯ, ಬನ್ನಹಳ್ಳಿ ಬಸವರಾಜು, ಕನ್ನಾಯಕನಹಳ್ಳಿ ಮರಿಸ್ವಾಮಿ, ಕಳ್ಳೀಪುರ ಮಹದೇವಸ್ವಾಮಿ, ಕೆ.ಎಂ.ಶಾಂತರಾಜು, ಸಿದ್ದಲಿಂಗಮೂರ್ತಿ, ಅಪ್ಪಣ್ಣ, ಕುರುಬೂರು ಸಿದ್ದೇಶ್, ವಾಟಾಳು ನಾಗರಾಜು ಮತ್ತಿತರರಿದ್ದರು.