ಸಾರೋಟಿನಲ್ಲಿ ಚಾಮುಂಡೇಶ್ವರಿ ಚಿತ್ರಪಟ ಮೆರವಣಿಗೆಗೆ ಮುಂದಾಗಿದ್ದ ವಾಟಾಳ್ ನಾಗರಾಜ್ ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು

ಮೈಸೂರು, ಅ.26(ಪಿಎಂ)- ಸರಳ ದಸರಾ ಮಹೋತ್ಸವ ಖಂಡಿಸಿ ಕನ್ನಡ ಚಳ ವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಸಲು ಉದ್ದೇ ಶಿಸಿದ್ದ ಚಾಮುಂಡೇಶ್ವರಿ ಚಿತ್ರಪಟ ಮೆರ ವಣಿಗೆಗೆ ಪೊಲೀಸರು ತಡೆಯೊಡ್ಡಿದ ರಲ್ಲದೆ, ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ಅರಮನೆ ಉತ್ತರ ದ್ವಾರದಿಂದ ಬನ್ನಿ ಮಂಟಪದವರೆಗೆ ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಚಿತ್ರಪಟ ಮೆರವಣಿಗೆ ಮಾಡಲಿದ್ದೇವೆ ಎಂದು ಈ ಹಿಂದೆಯೇ ವಾಟಾಳ್ ನಾಗರಾಜ್ ಘೋಷಣೆ ಮಾಡಿ ದ್ದರು. ಅದರಂತೆ ಸೋಮವಾರ ಸಾರೋಟು, ಚಾಮುಂಡೇಶ್ವರಿ ಚಿತ್ರಪಟ ಹಾಗೂ ವಾದ್ಯಗಳೊಂದಿಗೆ ಅರಮನೆ ಉತ್ತರ ದ್ವಾರದತ್ತ ತೆರಳುತ್ತಿದ್ದ ವಾಟಾಳ್ ನಾಗ ರಾಜ್ ಮತ್ತು ಬೆಂಬಲಿಗರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲ ಮೂರ್ತಿ ಅವರನ್ನು ದೊಡ್ಡಗಡಿಯಾರದ ಬಳಿ ಪೊಲೀಸರು ವಶಕ್ಕೆ ಪಡೆದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಇಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಸರಾ ನಡೆಯುತ್ತಿದೆ. ದಸರಾವನ್ನು ಕೇವಲ 300 ಮಂದಿಗೆ ಸಿಮೀತಗೊಳಿಸಿ, ಅರಮನೆ ಯೊಳಗೆ ಮಾತ್ರ ಮೆರವಣಿಗೆ ಮಾಡುತ್ತಿ ದ್ದಾರೆ. ಆ ಮೂಲಕ ಅರಮನೆಯೊಳಗೆ ಜಂಬೂ ಸವಾರಿಯನ್ನು ಚಾಮುಂಡೇಶ್ವರಿ ಸಹಿತ ಬಂಧಿಸಿದ್ದಾರೆ ಎಂದು ಖಂಡಿಸಿ ದರು. ಮೈಸೂರು ಪರಂಪರೆ ಉಳಿಸುವ ಹಾಗೂ ಪ್ರಜಾಪ್ರಭುತ್ವ ಸಂಕೇತವಾಗಿ ನಾವು ಮೆರವಣಿಗೆ ಮಾಡಲು ಎಲ್ಲಾ ವ್ಯವಸ್ಥೆ ಮಾಡಿ ಕೊಂಡಿದ್ದರೆ, ಮೆರವಣಿಗೆ ಸಾಮಗ್ರಿ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪನವರಿಗೆ ಬುದ್ಧಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.