ಪಾಂಡವಪುರದಲ್ಲಿ ಸ್ವಯಂಪ್ರೇರಿತ ಬಂದ್

ಪಾಂಡವಪುರ, ಏ.24-ವೀಕೆಂಡ್ ಕಫ್ರ್ಯೂನಿಂದ ಪಾಂಡವಪುರದಲ್ಲಿ ವ್ಯಾಪಾರಿ ಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿದ್ದರು. ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ಕೊರೊನಾ ನಿಯಮ ಪಾಲಿಸು ವಂತೆ ಜನತೆಯನ್ನು ಎಚ್ಚರಿಸಿದರು.

ಪಾಂಡವಪುರ ತಾಲೂಕಿನಾದ್ಯಂತ ಕೊರೊನಾ ಅತಿವೇಗದಲ್ಲಿ ಹರಡುತ್ತಿರು ವುದರಿಂದ ಶುಕ್ರವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಬಹುತೇಕ ಎಲ್ಲಾ ಅಂಗಡಿಗಳನ್ನು ಸ್ವತಃ ಮಾಲೀಕರೇ ಮುಚ್ಚುವ ಮೂಲಕ ಕಫ್ರ್ಯೂಗೆ ಬೆಂಬಲ ಸೂಚಿಸಿದರು. ಕೆಲ ಅಂಗಡಿಗಳು ಮಾತ್ರ ಅರ್ಧ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಸಂಜೆ ವೇಳೆಗೆ ಎಲ್ಲವೂ ಸಂಪೂರ್ಣ ಬಂದ್ ಆಯಿತು.

ಶುಕ್ರವಾರ ಸಂಜೆ 6 ಗಂಟೆಯಿಂದಲೇ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣ ಸಂಪೂರ್ಣ ನಿಶ್ಯಬ್ಧವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪೂಜಾ ಕುಂಟೋಜಿ ಅವರು ಪಟ್ಟಣದಾದ್ಯಂತ ಸಂಚರಿಸಿ, ಕೊರೊನಾ ನಿಯಮ ಪಾಲಿಸುವಂತೆ ಸಾರ್ವಜನಿ ಕರಲ್ಲಿ ಮನವಿ ಮಾಡಿಕೊಂಡರು.

ತಹಸೀಲ್ದಾರ್ ಪ್ರಮೋದ್ ಪಾಟೀಲ್ ಸಹ ಕಂದಾಯ ಇಲಾಖೆ ಸಿಬ್ಬಂದಿ ಯೊಂದಿಗೆ ಪಟ್ಟಣದಲ್ಲಿ ಸಂಚರಿಸಿ, ಜನಸಂದಣಿ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಜನರಿಗೆ ಅರಿವು ಮೂಡಿಸಿದರು. ಅನಗತ್ಯವಾಗಿ ಸಂಚರಿಸದಂತೆ ಮನವಿ ಮಾಡಿದರು.