ಖಾಸಗಿ ಆಸ್ಪತ್ರೆಯಿಂದ ಮೃತದೇಹದೊಂದಿಗೆ ಶವಸಂಸ್ಕಾರಕ್ಕೂ ಹಣ ಕೊಡಿಸಿದರು

ಬೆಂಗಳೂರು, ಜೂ. 17(ಕೆಎಂಶಿ)-ನಮ್ಮ ಪಕ್ಷದಲ್ಲಿ ಯಾರೂ ಲಕ್ಷ್ಮಣರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಮುಂದು ವರಿಯುತ್ತೇನೋ ಇಲ್ಲವೋ ಎಂದು ಹೇಳಲು ನನಗೆ ಭವಿಷ್ಯ ಹೇಳುವುದು ಗೊತ್ತಿಲ್ಲ” ಎಂದರು. ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅರುಣ್ ಸಿಂಗ್ ಅವರ ಭೇಟಿ ಹಾಗೂ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲವೂ ಸರಿಹೋಗುತ್ತದೆ ಎಂದು ಅವರು ಪುನರುಚ್ಛರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇಪದೆ ಸಮಾಲೋಚನೆ ನಡೆಯುತ್ತಲೇ ಇರುತ್ತದೆ. ಇದರಲ್ಲಿ ತಪ್ಪೇನಿದೆ? ಸರಕಾರ ಉತ್ತಮವಾಗಿ ಕೆಲಸ ಮಾಡುವುದು, ಪಕ್ಷವನ್ನು ಬಲಿಷ್ಠವಾಗಿ ಮುನ್ನಡೆಸುವುದು, ಜನಾಭಿಪ್ರಾಯ ಸಂಗ್ರಹಿಸುವುದು, ಜನರ ಬಳಿ ವಿಶ್ವಾಸ ಹೆಚ್ಚಿಸಿಕೊಳ್ಳು ವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ನಾವು ಅಧಿಕಾರ ಪಡೆದಿರುವುದೇ ಜನರ ಸೇವೆಗೆ ಎನ್ನುವುದನ್ನು ಮರೆಯಬಾರದು. ಸಚಿವರಾದ ಸಿ.ಪಿ.ಯೋಗೇಶ್ವರ್, ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ. ನೀವು ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದರು. ಮುಂದಿನ ಚುನಾವಣೆಗೆ ಪಕ್ಷದ ಮೂಲಕವೇ ಮತಯಾಚನೆ ನಡೆಸುತ್ತೇವೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಎದುರಿಸುವಷ್ಟೇ ನಮ್ಮ ಗುರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ನಮ್ಮ ಬಿಜೆಪಿ ಪಕ್ಷಕ್ಕೆ ಶಕ್ತಿ, ನಿರ್ದಿಷ್ಟ ಗುರಿ ಇದೆ. ಮುಂದಿನ ಹಾದಿಗಳ ಬಗ್ಗೆ ಪಕ್ಷವೇ ನಿರ್ಧಾರ ಮಾಡುತ್ತದೆ. ಈಗ ಯಾವುದೇ ಗೊಂದಲ ಇದ್ದರೂ ಪರಿಹಾರವಾಗುತ್ತದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರಕಾರ ನಡೆಯುತ್ತಿದೆ. ನಾನು ಸಹ ಅವರ ಸಂಪುಟದಲ್ಲೇ ಇದ್ದೇನೆ. ಸಚಿವ ಸಂಪುಟ ಪುನಾ ರಚನೆ ಬಗ್ಗೆ ಈಗ ಏನೇ ಹೇಳಿದರೂ ಗೊಂದಲ ಸೃಷ್ಟಿಯಾಗುತ್ತದೆ. ಆ ಬಗ್ಗೆ ಕೂಡ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಈಗಾಗಲೇ ಪಕ್ಷದ ವರಿಷ್ಠರು ಹೇಳಿರುವ ಮಾತುಗಳನ್ನು ನಾನು ಮತ್ತೆ ಮತ್ತೆ ಮಾತನಾಡುವುದಿಲ್ಲ. ಯಾವಾಗಲೂ ಸ್ಪರ್ಧೆ ಇರಬೇಕು. ಆಸೆ ಇರಬೇಕು. ಇಂದು ಉಸ್ತುವಾರಿ ಸಚಿವನಾಗಿ ನಾನಿದ್ದೇನೆ. ಮುಂದೆ ಇನ್ಯಾರೋ ಇರುತ್ತಾರೆ. ಇದರಲ್ಲಿ ತಪ್ಪೇನು ಎಂದು ಜಿಲ್ಲಾ ಉಸ್ತುವಾರಿ ಕುರಿತಂತೆ ಅವರು ಪ್ರತಿಕ್ರಿಯಿಸಿದರು.