ಮೈಸೂರಲ್ಲಿ ಹಾಡಹಗಲೇ ಮಹಿಳೆ ಸರ ಅಪಹರಣ

ಮೈಸೂರು, ಮೇ 16- ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕುತ್ತಿಗೆಯಿಂದ ಬೈಕ್‍ನಲ್ಲಿ ಬಂದ ಖದೀಮರಿಬ್ಬರು 20 ಗ್ರಾಂ ಚಿನ್ನದ ಸರ ಅಪಹರಿಸಿರುವ ಘಟನೆ ಮೈಸೂರಿನ ಕಾಕರವಾಡಿಯ ಜೈನ್ ಭವನ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಕಾಕರವಾಡಿ ನಿವಾಸಿ ಮಂಗಳಮ್ಮ (50) ಸುಮಾರು 75 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಳೆದುಕೊಂಡವರು. ಸಮೀಪದ ಅಂಗ ಡಿಗೆ ತೆರಳಿ ಹಿಂದಿರುಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಖದೀಮರು 20 ಗ್ರಾಂ ಸರವನ್ನು ಎಗರಿಸಿ ಮಧ್ಯಾಹ್ನ 12.45 ಗಂಟೆ ವೇಳೆ ಪರಾರಿಯಾದರು. ಮಂಗಳಮ್ಮ ಕೈಗೆ 10 ಗ್ರಾಂ ಸರದ ಚೂರು ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಗಂಗಾಧರ್ ಹಾಗೂ ಸಿಬ್ಬಂದಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾಕ್‍ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಕಾರ್ಯಾಚರಣೆ ಆರಂಭಿಸಿರುವ ಸರ ಗಳ್ಳರು ಹಾಡಹಗಲೇ ಕೈಚಳಕ ತೋರಿದ್ದಾರೆ. ರಸ್ತೆ ಬದಿಯ ಸಿಸಿ ಕ್ಯಾಮೆರಾಗಳ ಫುಟೇಜ್ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.