ಭೇರುಂಡ ಫೌಂಡೇಷನ್ ವತಿಯಿಂದ ಹಳ್ಳಿಕಾರ್, ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆಗೆ ಅಗತ್ಯ ಸಹಕಾರ

ಸಚಿವ ಪ್ರಭು ಚವ್ಹಾಣ್ ಅವರಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ
ಮೈಸೂರು,ಫೆ.17(ಪಿಎಂ)-ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಭೇರುಂಡ ಫೌಂಡೇಷನ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಶುಸಂಗೋಪನೆ ಸಚಿವ ಪ್ರಭುಚವ್ಹಾಣ್ ಅವರಿಗೆ ಅಭಯ ನೀಡಿದರು.

ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದು ವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬುಧವಾರ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್, ಅವರೊಂದಿಗೆ ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಭೇರುಂಡ ಫೌಂಡೇ ಷನ್ ವತಿಯಿಂದ ಸಹಕಾರ ನೀಡುವುದಾಗಿ ಸಚಿವರಿಗೆ ಯದುವೀರ್ ಒಡೆಯರ್ ತಿಳಿಸಿದರು.

45 ಸಾವಿರ ಎಕರೆ ಗೋಮಾಳ ಅಮೃತ್ ಮಹಲ್ ತಳಿಗಳ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಯುದ್ಧದ ಸಂದರ್ಭದಲ್ಲಿ ಅಮೃತ್ ಮಹಲ್ ಗೋವುಗಳನ್ನು ಬಳಸಿಕೊಂಡು ವೈರಿಗಳನ್ನು ಹಿಮ್ಮೆಟ್ಟಿಸಿದ ಉದಾ ಹರಣೆಗಳಿವೆ ಎಂದು ಯದುವೀರ್ ಹೇಳಿದರು.

ಅಲ್ಲದೆ, ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಿರುವುದಕ್ಕೆ ಸಚಿವರಿಗೆ ಅಭಿನಂದನೆ ತಿಳಿಸಿದ ಯದುವೀರ್, ಈ ಕಾಯ್ದೆಯ ಅನುಷ್ಠಾನ ನಮ್ಮಲ್ಲಿರುವ ದೇಸಿ ತಳಿಗಳ ಸಂರಕ್ಷಣೆಗೆ ನಾಂದಿ ಹಾಡಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಸಚಿ ವರು, ಅಮೃತ್ ಮಹಲ್ ಕಾವಲಿನಲ್ಲಿ ಸುಮಾರು ಐದು ಸಾವಿರ ಎಕರೆಯಲ್ಲಿ ಮೇವು ಬೆಳೆಯುವ ಉದ್ದೇಶವಿದೆ ಎಂದು ಅವರಿಗೆ ತಿಳಿಸಿದರು.