ಪಾದಯಾತ್ರೆ ಮೂಲಕ ಶ್ರೀಮತಿ ಲಲಿತಾ ಜಿ.ಟಿ. ದೇವೇಗೌಡ ಮತ ಯಾಚನೆ

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ. ದೇವೇಗೌಡರ ಪರವಾಗಿ ಅವರ ಪತ್ನಿ ಲಲಿತಾ ಜಿ.ಟಿ. ದೇವೇಗೌಡ ಅವರು ಬುಧವಾರ ಮೈಸೂರಿನ ದಟ್ಟಗಳ್ಳಿಯ ರಾಜರಾಜೇಶ್ವರಿನಗರದಲ್ಲಿ ಮತ ಯಾಚಿಸಿದರು.

ಮೈಸೂರು: ಇದುವರೆಗೆ ತೆರೆಮರೆ ಪಕ್ಷದ ಕಾರ್ಯ ಕರ್ತರು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಕೈಲಾದ ನೆರವು ನೀಡುತ್ತಿದ್ದ ಮಾಜಿ ಸಚಿವ ಹಾಗೂ ಹಾಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡರ ಪರ ಅವರ ಪತ್ನಿ ಶ್ರೀಮತಿ ಲಲಿತಾ ಜಿ.ಟಿ.ದೇವೇಗೌಡ ಈಗ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಇಂದು ಬೆಳಿಗ್ಗೆ ಬೋಗಾದಿ ಬಡಾವಣೆ, ಬೆಮೆಲ್ ಲೇಔಟ್ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೈಸೂರಿನ ದಟ್ಟಗಳ್ಳಿ, ರಾಜರಾಜೇಶ್ವರಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಉರಿ ಬಿಸಿಲಲ್ಲೇ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಹಿಂದೆ ಜಿ.ಪಂ ಸದಸ್ಯರೂ ಆಗಿದ್ದ ಶ್ರೀಮತಿ ಲಲಿತಾ ಅವರು ತಮ್ಮ ಹನಗೂಡು ಕ್ಷೇತದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನ ಮನ್ನಣೆ ಪಡೆದಿದ್ದರು. ಹುಣಸೂರು ತಾಲೂಕಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಲಕ್ಷ್ಮಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸುವ ಮೂಲಕ ಸಾವಿ ರಾರು ಮಹಿಳೆಯರಿಗೆ ಸಾಲ ಸೌಲಭ್ಯ ದೊರಕಲು ಕಾರಣ ಕರ್ತರಾಗಿದ್ದರು. ಪತಿ ಜಿ.ಟಿ. ದೇವೇಗೌಡ ಶಾಸಕರು, ಸಚಿವರಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಜನರ ಕುಂದುಕೊರತೆಗಳನ್ನು ಆಲಿಸಿ, ಅದನ್ನು ನಿವಾರಿಸುವ ಕಾರ್ಯದಲ್ಲಿ ನಿರತರಾಗಿದ್ದ ಶ್ರೀಮತಿ ಲಲಿತಾ ಅವರು ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಿದ್ದರು. ಹಾಗಾಗಿ ಇವರು ಮತ ಯಾಚನೆಗೆ ಹೊರಟಾಗ ನೂರಾರು ಮಹಿಳೆಯರು ಅವರನ್ನು ಹಿಂಬಾಲಿಸಿದರು. ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಾವಿರಾರು ಮಂದಿಯನ್ನು ಭೇಟಿಯಾಗಿ ತಮ್ಮ ಪತಿಯ ಕಾರ್ಯಗಳನ್ನು ಪರಿಗಣಿಸಿ ಮತ್ತೊಮ್ಮೆ ಆಯ್ಕೆ ಮಾಡುವಂತೆ ಮನವಿ ಮಾಡಿದರು. ವೇಳೆ ಇವರು ಹೋದಲ್ಲೆಲ್ಲಾ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪ್ರತಿ ಮನೆಯಲ್ಲೀ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಕುಂಕುಮ, ಹೂ ನೀಡಿ, ಭರವಸೆ ನೀಡಲಾಯಿತು.