ಸುಧಾ ಮಹದೇವಯ್ಯ ಮರಳಿ ಕಾಂಗ್ರೆಸ್‍ಗೆ

ತಿ.ನರಸೀಪುರ: ಮೂಗೂರು ಜಿ.ಪಂ ಮಾಜಿ ಸದಸ್ಯೆ ಎಂ. ಸುಧಾಮಹದೇವಯ್ಯ ಅವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ ಅವರ ನಿವಾಸಕ್ಕೆ ಕೆಲವು ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ ಸಚಿವರ ಸಮ್ಮುಖದಲ್ಲಿ ಪಕ್ಷಕ್ಕೆ ಮರು ಸೇರ್ಪಡೆಯಾದರು.

ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ರಾಜಕೀಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್ ಉತ್ತಮವಾದ ಪಕ್ಷವಾಗಿದ್ದು, ಸಾಮಾಜಿಕ ಬದ್ಧತೆ ಯೊಂದಿಗೆ ನಿಷ್ಠೆಯಿಂದ ದುಡಿಯುವವರಿಗೆ ಎಲ್ಲಾ ವರ್ಗದವರಿಗೂ  ಅಧಿಕಾರ ಸಿಗಲಿದೆ. ಕಾಂಗ್ರೆಸ್ ಪಕ್ಷದಿಂದ ಪ್ರಥಮ ಬಾರಿಗೆ ಜಿ.ಪಂ ಸದಸ್ಯೆಯಾಗಿದ್ದ ಸುಧಾ ಮಹ ದೇವಯ್ಯ ಪಕ್ಷಕ್ಕೆ ಮರಳಿರುವುದನ್ನು ಸ್ವಾಗತಿಸುತ್ತೇನೆ. ಪ್ರಸಕ್ತ ಚುನಾವಣೆ ಪ್ರತಿಷ್ಠೆ ಯಾಗಿದ್ದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕರೆ ನೀಡಿದರು.

ಎಂ.ಸುಧಾ ಮಹದೇವಯ್ಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಯಂತೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಮೂಗೂರು ಜಿ.ಪಂ ಸದಸ್ಯೆಯಾಗಿ ಕಾಂಗ್ರೆಸ್ ಪಕ್ಷದ ಋಣ ತನ್ನ ಮೇಲಿರುವುದರಿಂದ ನರಸೀಪುರದಲ್ಲಿ ಪಕ್ಷದ ಗೆಲುವಿಗೆ ಕಾರ್ಯ ಕರ್ತರು ಮತ್ತು ಮುಖಂಡರೊಂದಿಗೆ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.

ಡೈರಿ ಕಾರ್ಯದರ್ಶಿ ಎಂ.ನಾಗೇಂದ್ರ, ಗ್ರಾ.ಪಂ ಸದಸ್ಯ, ಪಾರುಪತ್ತೇಗಾರ್ ಎಂ.ಬಿ. ಸಾಗರ್, ಹಿರಿಯ ಸದಸ್ಯರಾದ ಎಂ.ಪಿ. ನಿಂಗಪ್ಪ, ಮಹದೇವಸ್ವಾಮಿ, ಮಾಜಿ ಸದಸ್ಯ ಮಹದೇವ, ಮುಖಂಡರಾದ ಜಲ್ಲಿ ಮಹದೇವಸ್ವಾಮಿ, ನಿಂಗರಾಜು, ಬನ್ನೂರು ವಿಷಕಂಠಯ್ಯ ಹಾಗೂ ಇನ್ನಿತರರು ಹಾಜರಿದ್ದರು.