ಕೆಸರು ಹೊಂಡದಲ್ಲಿ ಬಿದ್ದು ಕಾರ್ಮಿಕ ಮಹಿಳೆ ಸಾವು

ಮಡಿಕೇರಿ:  ಕೂಲಿ ಕಾರ್ಮಿಕ ಮಹಿಳೆಯೋರ್ವರು ಕೆಸರು ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ನಗರದ ಮೀನು ಮಾರುಕಟ್ಟೆಯ ಹಿಂಭಾಗ ನಡೆದಿದೆ. ಮೂಲತಃ ಕುಂಬೂರು ನಿವಾಸಿ ಶಾಂತ(47) ಎಂಬಾಕೆಯೇ ಮೃತಪಟ್ಟ ದುರ್ದೈವಿ.

ಮೃತ ಶಾಂತ ನಿನ್ನೆ ರಾತ್ರಿ ಕೂಲಿ ಕೆಲಸ ಮುಗಿಸಿ ರಾತ್ರಿ 9.30 ಗಂಟೆಗೆ ಮಾರ್ಕೆಟ್ ಹಿಂಭಾಗದ ಮೀನು ಮಾರ್ಕೆಟ್‍ನ ಸಮೀಪದ ಶಿಥಿಲಾವಸ್ಥೆಯ ಕಟ್ಟಡದ ಪಕ್ಕದಲ್ಲಿ ಮಲಗಿದ್ದರು ಎನ್ನಲಾಗಿದೆ. ಬುಧವಾರ ಬೆಳಗಿನ 6 ಗಂಟೆಗೆ ಸಮಯದಲ್ಲಿ ಪಕ್ಕದ ಲ್ಲಿದ್ದ ಕೆಸರಿನ ಹೊಂಡದಲ್ಲಿ ಬಿದ್ದು ಹೊರಳಾಡುತ್ತಿರುವುದನ್ನು ಇತರ ಕೂಲಿ ಕಾರ್ಮಿಕರು ಕಂಡಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕ ಹರೀಶ್ ರೈ ಎಂಬಾತ ಆಕೆಯನ್ನು ಮೇಲಕ್ಕೆತ್ತಿ ಬಕೆಟ್‍ನಿಂದ ನೀರು ಸುರಿದು ಶುಚಿಗೊಳಿಸಲು ಮುಂದಾಗಿದ್ದಾನೆ. ಮತ್ತೆ ನೀರು ತರಲು ತೆರಳಿದ ಹರೀಶ್ ಮರಳಿ ಒಂದು ನೋಡಿದಾಗ ಶಾಂತ ಮೃತಪಟ್ಟಿರುವುದು ಕಂಡು ಬಂದಿದೆ. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತೆ ಶಾಂತ ಓರ್ವ ವಿವಾಹಿತ ಮಗಳನ್ನು ಅಗಲಿದ್ದಾರೆ.