ಅಂಚೆ ಪಾವತಿ ಬ್ಯಾಂಕ್ ಸೌಲಭ್ಯ ಸದ್ಬಳಕೆಗೆ ಸಲಹೆ

ಬದನಗುಪ್ಪೆ:  ‘ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೌಕರ್ಯವನ್ನು ಗ್ರಾಮಾಂತರ ಪ್ರದೇಶದ ಜನರು ಉಪಯೋಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು’ ಎಂದು ತಿ.ನರಸೀಪುರ ಅಂಚೆ ನಿರೀಕ್ಷಕ ಎಂ.ಮನುಕುಮಾರ್ ಸಲಹೆ ನೀಡಿದರು. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಂಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಯೂಆರ್ ಕಾರ್ಡ್ ವಿತರಣೆ ಮಾಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ 164 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯು ದೇಶಾ ದ್ಯಂತ ಗ್ರಾಮೀಣ ಜನರಿಗೆ ನೇರ ಹಾಗೂ ಮುಕ್ತ ಸೇವೆಯನ್ನು ಗ್ರಾಮೀಣ ಅಂಚೆ ನೌಕರರ ಮೂಲಕ ಸೇವೆ ನೀಡುತ್ತಾ ಬಂದಿದೆ. ಪ್ರಧಾನಿ ನರೇಂದ್ರಮೋದಿ ಅವರು ಭಾರತೀಯ ಅಂಚೆ ಸೇವೆಯನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೆ.1 ರಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಅನ್ನು ನವದೆಹಲಿ ಯಲ್ಲಿ ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು. ತಾಪಂ ಸದಸ್ಯ ಬಸವಣ್ಣ, ಗ್ರಾಪಂ ಅಧ್ಯಕ್ಷ ಮುಕುಂದಮೂರ್ತಿ ಮಾತನಾಡಿದರು. ಇದಕ್ಕೂ ಮೊದಲು ಮಾಜಿ ಚೇರ್ಮನ್ ಎಸ್. ಪುಟ್ಟಸ್ವಾಮಪ್ಪ ಅವರು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಪಂ ಪಿಡಿಓ ಮಾದಪ್ಪ, ಪ್ರೌಢಶಾಲೆಯ ಸಹ ಶಿಕ್ಷಕ ಮಾದೇಶ್, ಅಂಚೆ ಪಾಲಕರಾದ ಜಿ. ಶಿವಣ್ಣ, ಸಹಾಯಕ ಅಂಚೆಪಾಲಕ ಬಿ.ಪಿ.ಮಹದೇವ ಸ್ವಾಮಿ, ಅಂಚೆ ನೌಕರರ ಸಂಘದ ಗೌರವ ಅಧ್ಯಕ್ಷ ಶೇಖಣ್ಣ, ಸಹ ಕಾರ್ಯದರ್ಶಿ ಎನ್.ಬಿ.ಕುಮಾರ್, ಸದಸ್ಯರಾದ ಎಂ.ಮಾದೇಶ್, ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.