ಮಲೈಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

ಹನೂರು:  ಸಮೀಪದ ಮಲೈಮಹದೇಶ್ವರ ಬೆಟ್ಟದಲ್ಲಿ ಶ್ರಾವಣ ಮಾಸದ ಕುಂಭಾಷೇಕ ಹಾಗೂ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕಾರ್ಯಗಳು ಭಾನುವಾರ ವಿಜೃಂಭಣೆಯಿಂದ ಜರುಗಿತು.

ಭಕ್ತರು ದೇವಸ್ಥಾನ ಮುಂಭಾಗ ಹಾಗೂ ರಂಗಮಂದಿರ ವಿವಿಧೆಡೆ ಬಿಡಾರ ಹೂಡಿದ್ದ ಭಕ್ತರು ಮಾದಪ್ಪನ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು.

ಬೆಳಿಗ್ಗೆಯಿಂದಲೇ ದೇವಸ್ಥಾನ ಪ್ರಧಾನ ಅರ್ಚಕರು ಸೇರಿದಂತೆ ಬೇಡಗಂಫಣ 108 ಮಕ್ಕಳು ಬಿಲ್ವಾರ್ಚನೆ ಅಭಿಷೇಕ ಮಹಾಮಂಗಳಾರತಿ ಪೂಜಾ ಕಾರ್ಯಗಳು ವಿಧಿವಿಧಾನಗಳೊಂದಿಗೆ ಜರುಗಿದವು. ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಪಾಲ್ಗೊಳುವ ಮೂಲಕ ಇಷ್ಟಾರ್ಥ ಹರಕೆ ಕಾಣಿಕೆ ಸಲ್ಲಿಸಿದರು.

ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಗರ್ಭಗುಡಿಯಲ್ಲಿ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದ ವಿವಿಧೆÀಡೆಗಳಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದರು. ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ, ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ದಾಸೋಹ ಭವನದಲ್ಲಿ ಪ್ರಾಧಿಕಾರದ ವತಿಯಿಂದ ನೆರೆದಿದ್ದ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನಾ ವ್ಯವಸ್ಥೆ ಮಾಡಲಾಯಿತು.ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ, ಸಾಲೂರು ಮಠದ ಗುರುಸ್ವಾಮಿಗಳು, ಉಪಕಾರ್ಯದರ್ಶಿ ರಾಜಶೇಖರ್ ಮೂರ್ತಿ, ಅಧೀಕ್ಷಕ ಎಂ.ಬಸವರಾಜು ಹಾಗೂ ಪ್ರಾಧಿಕಾರದ ಸಿಬ್ಬಂದಿ ಇದ್ದರು.