ಮುಖ್ಯಮಂತ್ರಿಗೆ ಮತ್ತೊಂದು ಸಂಕಷ್ಟ

ಬೆಂಗಳೂರು,ಜು.20-ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸುಮಾರು 4 ಎಕರೆ ಭೂಮಿಯ ಡಿ-ನೋಟಿಫಿಕೇಷನ್ ಮಾಡಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 19 ಆರೋಪಿಗಳನ್ನು ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಈ ಹಿಂದೆ 2006-07ರ ಅವಧಿಯಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಬನಶಂಕರಿ ಬಡಾವಣೆಯ 4 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಿದ್ದರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಹದೇವಸ್ವಾಮಿ ಜನಪ್ರತಿನಿಧಿ ಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾ ಧೀಶ ರಾಮಚಂದ್ರ ಡಿ.ಹೆಬ್ಬಾರ್ ಸಿಎಂ ಕುಮಾರಸ್ವಾಮಿ ಸೇರಿ 19 ಆರೋಪಿಗಳು ವಿಚಾ ರಣೆಗೆ ಒಳಪಡಬೇಕೆಂದು ಆದೇಶಿಸಿದ್ದಾರೆ. ಡಿನೋಟಿಫಿಕೇಷನ್ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ವಜಾಗೊಳಿಸಿರುವ ನ್ಯಾಯಾಲಯ, ಸಿಎಂ ಕುಮಾರಸ್ವಾಮಿಯವರನ್ನು ವಿಚಾರಣೆಗೆ ಒಲಪಡಬೇಕೆಂದು ಆದೇಶಿಸಿದೆ. ಬನಶಂಕರಿ ಐದನೇ ಹಂತದಲ್ಲಿರುವ ಹಲಗೆವಡೇರಹಳ್ಳಿಯ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಳ್ಳ ಲಾಗಿದ್ದ ಭೂಮಿಯನ್ನು 2006-07ರ ಅವಧಿಯಲ್ಲಿ ಅಕ್ರಮ ಡಿನೋಟಿಫೈ ಮಾಡಿರುವುದಾಗಿ ಆರೋಪವಿತ್ತು. ಅಂದು ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಇಲಾಖೆಗಳ ಮನವಿಯನ್ನು ಲೆಕ್ಕಿಸದೆ ಭೂಮಿಯ ಡಿನೋಟಿಫೈ ಮಾಡಿದ್ದರೆನ್ನಲಾಗಿದೆ.