ಸ್ಮಶಾನ ತೆರವಿಗೆ ಆಗ್ರಹಿಸಿ ನಗುವಿನಹಳ್ಳಿ ಗ್ರಾಮಸ್ಥರಿಂದ ತಾಲೂಕು ಕಚೇರಿ ಮುಂದೆ ಧರಣಿ

ಮೈಸೂರು, ಡಿ.30(ಎಂಕೆ)- ಸ್ಮಶಾನ ಜಾಗ ಒತ್ತುವರಿಯನ್ನು ತೆರವುಗೊಳಿಸ ಬೇಕು ಎಂದು ಒತ್ತಾಯಿಸಿ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಸ್ಮಶಾನ ಭೂಮಿಯ ಸರ್ವೇ ನಂಬರ್ ಮೈಸೂರು ತಾಲೂಕಿಗೆ ಸೇರಲಿದ್ದು, ಸ್ಮಶಾನ ಜಾಗದ 2.50 ಎಕರೆ ಜಾಗದ ಪೈಕಿ ಒಂದೂ ವರೆ ಎಕರೆಯಷ್ಟು ಜಾಗವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಕೆಲ ಪ್ರಭಾವಿ ವ್ಯಕ್ತಿಗಳು ಈ ಜಾಗವನ್ನು ಕಬಳಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಸ್ಮಶಾ ನವೇ ಇರುವುದಿಲ್ಲ. ಶವ ಹೂಳಲು ಜಾಗವೇ ಸಿಗದಂತಾಗಲಿದೆ. ಆದ್ದರಿಂದ ಕೂಡಲೇ ಒತ್ತುವರಿಯನ್ನು ತೆರವು ಮಾಡಿ ಸ್ಮಶಾನ ಜಾಗವನ್ನು ಉಳಿಸಬೇಕು ಎಂದು ಆಗ್ರಹಿಸಿ ದರು. ಗ್ರಾಮಸ್ಥರ ಮನವಿ ಸ್ವೀಕರಿಸಿದ ತಹಸೀಲ್ದಾರ್ ರಮೇಶ್‍ಬಾಬು, ಈ ಕುರಿತು ಪರಿಶೀಲನೆ ನಡೆಸಿ, ಒತ್ತುವರಿ ತೆರವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಲೋಕೇಶ್, ಮಹದೇವಸ್ವಾಮಿ, ಚೆಲುವರಾಜು, ಶಂಕರ್, ಚಿಕ್ಕಮಹ ದೇವಯ್ಯ ಇನ್ನಿತರರು ಉಪಸ್ಥಿತರಿದ್ದರು.