ಜಾಮೀನು ಅರ್ಜಿ ವಜಾ; ಚಿದಂಬರಂಗೆ ಬಂಧನ ಭೀತಿ

ನವದೆಹಲಿ,ಆ.20-ಐಎನ್‍ಎಕ್ಸ್ ಮೀಡಿಯಾ ಅವ್ಯವಹಾರ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ದೆಹಲಿ ಹೈಕೋರ್ಟ್ ಇಂದು ವಜಾ ಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾ ಲಯ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಬೆನ್ನಿಗೆ ಬಿದ್ದಿದ್ದಾರೆ.

ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಚಿದಂಬರಂ ದೆಹಲಿ ಮನೆಗೆ 2 ಬಾರಿ ತೆರಳಿದ್ದರು. ಬಳಿಕ ಇ.ಡಿ.ಯ ಇಬ್ಬರು ಅಧಿಕಾರಿಗಳು ಕೂಡ ಹೋಗಿದ್ದರು. ಆದರೆ ಮಾಜಿ ಸಚಿವರು ಮನೆಯಲ್ಲೂ ಇಲ್ಲ, ಅವರ ಫೆÇೀನ್ ಕೂಡ ಸ್ವಿಚ್ ಆಫ್ ಆಗಿದೆ. ಸದ್ಯ ಸಿಬಿಐ, ಇ.ಡಿ.ಅಧಿಕಾರಿಗಳು ಅವ ರನ್ನು ಹುಡುಕುತ್ತಿದ್ದು, 2 ಗಂಟೆಯೊಳಗೆ ತಮ್ಮ ಮುಂದೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಗ್ರೂಪ್ ನಲ್ಲಿ ಅಕ್ರಮ ಹಣ ಹೂಡಿಕೆ ಮತ್ತು ಭ್ರಷ್ಟಾ ಚಾರಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ತನಿಖೆ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಗೆ ಜಾಮೀನು ನೀಡಬೇಕು ಎಂದು ಚಿದಂಬರಂ ಅವರು ದೆಹಲಿ ಹೈಕೋರ್ಟ್‍ಗೆ ಮನವಿ ಮಾಡಿ, ಅರ್ಜಿ ಸಲ್ಲಿಸಿದ್ದರು. ಆದರೆ ಅವರನ್ನು ಕಸ್ಟಡಿಗೆ ಕೊಡಬೇಕು. ಇಲ್ಲದಿದ್ದರೆ ವಿಚಾರಣೆ ವೇಳೆ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೊದ ಲಿನಿಂದಲೂ ಸಿಬಿಐ, ಇ.ಡಿ ಅಧಿಕಾರಿ ಗಳು ಕೋರ್ಟ್‍ನಲ್ಲಿ ವಾದಿಸುತ್ತಲೇ ಬಂದಿದ್ದರು.

ಈಗ ಜಾಮೀನು ನಿರಾಕರಣೆ ಆಗಿರುವುದರಿಂದ ಅವರನ್ನು ಬಂಧಿಸಲು ಅಧಿಕಾರಿ ಗಳು ಕಾಯುತ್ತಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ಆರ್ಥಿಕ ಅಪರಾಧವನ್ನು ಪಿ ಚಿದಂಬರಂ ಅವರು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಮತ್ತು ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳಿರುವುದರಿಂದ ನಿರೀಕ್ಷಣಾ ಜಾಮೀನು ನೀಡುವುದು ಸಾಧ್ಯವೇ ಇಲ್ಲ ಎಂದು ದಿಲ್ಲಿ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಚಿದಂಬರಂ ಅವರು ಮಂಗಳವಾರ ರಾತ್ರಿಯೇ ಸುಪ್ರೀಂಕೋರ್ಟ್ ಕದ ತಟ್ಟಿದ್ದು, ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕೇಂದ್ರ ಮಾಜಿ ಹಣಕಾಸು ಸಚಿವ, ಸುಪ್ರೀಂ ಕೋರ್ಟ್ ವಕೀಲ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾಗಿದ್ದು, 305 ಕೋಟಿ ರೂಪಾಯಿ ವಂಚನೆಯ ಈ ಪ್ರಕರಣದಲ್ಲಿ ಅವರು ಬಂಧನಕ್ಕೊಳಗಾಗುವ ಭೀತಿ ಎದುರಿಸುತ್ತಿದ್ದಾರೆ.

“ಇದೊಂದು ದೊಡ್ಡ ಮಟ್ಟದ ಆರ್ಥಿಕ ಅಪರಾಧವಾಗಿದ್ದು, ಈ ಪ್ರಕರಣವನ್ನು ತೀವ್ರವಾಗಿ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಂಸ್ಥೆಯ ಕೈಗಳನ್ನು ಕಟ್ಟಿ ಹಾಕುವ ಸಾಧ್ಯತೆಯೇ ಇಲ್ಲ. ಕೂಲಂಕುಷವಾಗಿ ತನಿಖೆಗೊಳಪಡಿ ಸಬೇಕಿದ್ದರೆ ಪಿ.ಚಿದಂಬರಂ ಅವರನ್ನು ವಶಕ್ಕೆ ನೀಡಬೇಕು ಎಂದು ತನಿಖಾ ಸಂಸ್ಥೆ ಕೋರಿದೆ” ಎಂದು ಆದೇಶ ನೀಡಿರುವ ನ್ಯಾಯಮೂರ್ತಿ ಸುನೀಲ್ ಗೌರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶದಿಂದಾಗಿ ಪಿ ಚಿದಂಬರಂ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್ ಕೂಡ ಮೇಲ್ಮನವಿಯನ್ನು ಕೂಡಲೆ ವಿಚಾ ರಣೆಗೆ ತೆಗೆದುಕೊಳ್ಳಲು ನಿರಾಕರಿಸಿದರೆ ಅಥವಾ ಈ ಆದೇಶಕ್ಕೆ ತಡೆ ನೀಡಲು ನಿರಾಕರಿ ಸಿದರೆ ಪಿ ಚಿದಂಬರಂ ಅವರ ಬಂಧನ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಯಾವುದೀ ಪ್ರಕರಣ?: 2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ, ಪಿ ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ, ಮೀಡಿಯಾ ಕುಳಗಳಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಒಡೆತನದಲ್ಲಿದ್ದ ಐಎನ್‍ಎಕ್ಸ್ ಮೀಡಿಯಾ, ಮಲೇಶಿಯಾದ ಕಂಪನಿಯಿಂದ 305 ಕೋಟಿ ರೂಪಾಯಿಗಳನ್ನು ಪಡೆದಿತ್ತು. ಆದರೆ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ 4.62 ಕೋಟಿ ರೂಪಾಯಿ ಹೂಡಿಕೆ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು.

ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಆದರೆ, ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕಾಗಿ ಅವರು ಕೆಲ ಕಾಲ ಬಂಧನಕ್ಕೂ ಒಳಗಾಗಿದ್ದರು. ವಿಚಾರಣೆಗೆ ಪಿ ಚಿದಂಬರಂ ಅವರು ಸಹಕರಿಸುತ್ತಿಲ್ಲ ಎಂಬುದು ಕೂಡ ಮಾಜಿ ಸಚಿವರಿಗೆ ಮಾರಕವಾಗುವ ಸಾಧ್ಯತೆಯಿದೆ. ಕೇಂದ್ರ ಮಾಜಿ ಸಚಿವ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪಿ.ಚಿದಂಬರಂ ಪ್ರತಿನಿಧಿಸುತ್ತಿದ್ದಾರೆ.