ಸಾವಯವ ಕೃಷಿ ಮಹತ್ವ ತಿಳಿಸಿದ ಬ್ಯಾತಹಳ್ಳಿ ಮಾದಪ್ಪ

ಮೈಸೂರು,ನ.23(ಪಿಎಂ)-ಮೈಸೂರಿನ ಜೆಪಿ ನಗ ರದ ಸಿದ್ಧಲಿಂಗೇಶ್ವರ ಬಡಾವಣೆ ನಿವಾಸಿ ಬ್ಯಾತಹಳ್ಳಿ ಮಾದಪ್ಪ ತಮ್ಮ 1 ಎಕರೆ ಜಮೀನಿನಲ್ಲಿ ಹಣ್ಣು, ತರಕಾರಿ ಬೆಳೆದು ಯಶಸ್ವಿಯಾಗಿ ದ್ದಾರೆ ಎಂದು ನಾಗನಹಳ್ಳಿ ಸಾವ ಯವ ಕೃಷಿ ಸಂಶೋಧನಾ ಕೇಂದ್ರದ ಡಾ.ಹೆಚ್.ಸಿ.ಗೋವಿಂದರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕಿನ ಬ್ಯಾತಹಳ್ಳಿಯಲ್ಲಿ 6 ಎಕರೆ ಜಮೀನು ಹೊಂದಿ ರುವ ಮಾದಪ್ಪ 1 ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬಾಳೆ, ತೆಂಗು, ಗಜನಿಂಬೆ, ಚಕ್ಕೊತ, ಸಪೋಟ ಸೇರಿದಂತೆ ತರಕಾರಿ ಬೆಳೆದು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಎಂದರು.

1965ರ ಬಳಿಕ ಅಧಿಕ ಇಳುವರಿ ಕೊಡುವ ತಳಿಗಳು ಹಾಗೂ ರಾಸಾಯನಿಕಗಳು ಬಂದವು. ಇವುಗಳು ಪರಿಸರ ಮಾಲಿನ್ಯ ಹಾಗೂ ಅನಾರೋಗ್ಯಕ್ಕೆ ಕಾರಣವಾದವು. ಈ ದುಸ್ಥಿತಿಯಿಂದ ಮುಕ್ತವಾಗಲು ಸಾವಯವ ಕೃಷಿ ಪದ್ಧತಿ ಅಗತ್ಯ. ಆರಂಭದಲ್ಲಿ ಈ ಪದ್ಧತಿಯಲ್ಲಿ ಇಳುವರಿ ಕಡಿಮೆ ಇದ್ದರೂ ಐದಾರು ವರ್ಷಗಳ ಬಳಿಕ ಉತ್ತಮ ಇಳುವರಿ ಪಡೆಯಬಹುದು. ಮಾದಪ್ಪ ಸಾವಯವ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ತಾವೇ ಜಮೀನಲ್ಲಿ ಶ್ರಮ ವಹಿಸಿ ದುಡಿಯುತ್ತಾರೆ. ಅಲ್ಲದೆ, 2 ದಿನಕ್ಕೊಮ್ಮೆ ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದ ಬಳಿ ತಾವೇ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ ಎಂದರು.

ಬ್ಯಾತಹಳ್ಳಿ ಮಾದಪ್ಪ ಮಾತನಾಡಿ, ಆರಂಭದಲ್ಲಿ ಗಾರೆ ಕೆಲಸ ಮಾಡುತ್ತಿದ್ದೆ. ಬಳಿಕ ಗುತ್ತಿಗೆದಾರನಾಗಿ ಕೆಲಕಾಲ ಕೆಲಸ ಮಾಡಿದೆ. ಇದರಿಂದ ತೃಪ್ತಿ ಕಾಣಲಿಲ್ಲ. ಸಾವ ಯವ ಕೃಷಿ ಆರಂಭಿಸಿದ ಮೇಲೆ ಜಮೀನಿನಲ್ಲಿ ದುಡಿಯುತ್ತಿ ದ್ದೇನೆ. ಜೊತೆಗೆ ನಮ್ಮ ಕುಟುಂಬದ ಆಹಾರಕ್ಕೂ ಇದೇ ಸಾವಯವ ಬೆಳೆಗಳನ್ನೇ ಬಳಸಿಕೊಳ್ಳುತ್ತಿದ್ದು, ಚಿಕ್ಕ ವಯ ಸ್ಸಿನಿಂದಲೂ ಮಧುಮೇಹ ಸಮಸ್ಯೆ ಎದುರಿಸುತ್ತಿದ್ದ ನಾನೀಗ ವೈದ್ಯರ ಔಷಧಗಳನ್ನೇ ನೆಚ್ಚಿಕೊಂಡಿಲ್ಲ. ಹೀಗಾಗಿ ಸಾವಯವ ಕೃಷಿಯ ಮಹತ್ವವನ್ನು ರೈತರು ಹಾಗೂ ಜನತೆ ಅರಿಯಬೇಕು ಎಂದರು.

ಮೈಸೂರು ತಾಲೂಕು ಕೃಷಿ ಅಧಿಕಾರಿ ಎಂ.ಎಸ್.ಗುರು ಮೂರ್ತಿ ಮಾತನಾಡಿ, ಸಾವಯವ ಕೃಷಿ ಮಂಡಳಿ ವತಿ ಯಿಂದ ಬ್ಯಾತಹಳ್ಳಿ ಮಾದಪ್ಪ ಅವರಿಗೆ ಸಾವಯವ ಬೆಳೆಗಾ ರರು ಎಂಬ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದರು. ಜೆಪಿನಗರ ವಿಶ್ವ ಮಾನವ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣ, ಯೋಗ ಶಿಕ್ಷಕ ಶಿವಪ್ರಕಾಶ್ ಗೋಷ್ಠಿಯಲ್ಲಿದ್ದರು.