36 ತಿಂಗಳಲ್ಲಿ ಮುಗಿಸ್ಬೇಕು, ಆದರೆ 18 ತಿಂಗಳಲ್ಲೇ ಮುಗಿಸ್ತಾರಂತೆ ರೇವಣ್ಣ

ಬೆಂಗಳೂರು:  ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಕಾಲಮಿತಿಯೊಳಗೆ ಪರಿವರ್ತಿಸುವ ಉಸ್ತುವಾರಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಹೆಗಲಿಗೆ ಹೊರಿಸಲು ಸರ್ಕಾರ ತೀರ್ಮಾನಿಸಿದೆ.

ಈ ಉದ್ದೇಶದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜನವರಿ 2ರಂದು ಬೆಂಗಳೂರು ನಗರ, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಹೆದ್ದಾರಿ ಕಾಮಗಾರಿ ಜನವರಿ 15 ರಿಂದ 11 ಕ್ಯಾಂಪ್‍ಗಳಲ್ಲಿ ಆರಂಭಗೊಳ್ಳಲಿದೆ, ಒಪ್ಪಂದದ ಪ್ರಕಾರ ಕಾಮಗಾರಿ 36 ತಿಂಗ ಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ 18 ತಿಂಗ ಳಲ್ಲಿ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿ ಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಈ ಉದ್ದೇಶದಿಂದಲೇ ರಸ್ತೆಯನ್ನು 11 ಕ್ಯಾಂಪ್‍ಗಳಾಗಿ ವಿಂಗಡಿಸಿ ಪ್ರತೀ ಕ್ಯಾಂಪ್‍ಗೆ 20 ಕಿಲೋ ಮೀಟರ್ ಉದ್ದ ರಸ್ತೆ ಕಾಮಗಾರಿಯ ಹೊಣೆ ವಹಿಸಲಾಗಿದೆ. ಪ್ರತಿ ಕ್ಯಾಂಪ್‍ಗೆ ವಹಿಸಿದ ಕೇಂದ್ರದಲ್ಲೇ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿಕೊಂಡು ಅಲ್ಲಿಂದಲೇ ತಮಗೆ ವಹಿಸಿದ ಕಾಮಗಾರಿ ಪ್ರತ್ಯೇಕವಾಗಿ ಪೂರ್ಣಗೊಳಿಸಬೇಕು. 18 ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಕೆಲಸವನ್ನು ವಿಭಜಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರ ಜೊತೆ 36 ತಿಂಗಳ ಒಪ್ಪಂದ ಮಾಡಿ ಕೊಂಡಿದ್ದರೂ, ಅವರು 24 ತಿಂಗಳಲ್ಲೇ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ, ಆದರೆ ನಾವು ಅದನ್ನು ಒಂದೂವರೆ ವರ್ಷ ದಲ್ಲೇ ಪೂರ್ಣಗೊಳಿಸಲು ಕ್ಯಾಂಪ್‍ಗಳನ್ನು ಮಾಡಿದ್ದೇವೆ. ಒಂದೇ ಕ್ಯಾಂಪ್ ಆದರೆ ಅಲ್ಲಿಂದಲೇ ಎಲ್ಲಾ ಸಲಕರಣೆಗಳು ಮತ್ತು ಕಾರ್ಮಿಕರು ತಮ್ಮ ನಿಗದಿತ ಸ್ಥಳಕ್ಕೆ ತೆರಳಿ ಕೆಲಸ ಮಾಡಲು ಸಾಗಾಣಿಕೆ ಸಮಯ ಹಿಡಿಯುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಂಡಿರುವುದಲ್ಲದೆ, ಕಾಮಗಾರಿ ವಿಭಜಿಸಿದ್ದೇವೆ.

ಈಗಾಗಲೇ ಹೊರವರ್ತುಲ ರಸ್ತೆ ಕಾಮಗಾರಿ ಭರದಿಂದ ಸಾಗಿದೆ, ಈಗ ಮುಖ್ಯ ರಸ್ತೆ ಕಾಮಗಾರಿ ಸಂಕ್ರಾಂತಿ ದಿನದಂದೇ ಪ್ರಾರಂಭವಾಗಲಿದೆ. 6 ಪಥದ ರಾಷ್ಟ್ರೀಯ ಹೆದ್ದಾರಿ ಸೇರಿ 10 ಪಥದ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿ 6,450 ಕೋಟಿ ರೂ. ವೆಚ್ಚ ತಗುಲಲಿದೆ. ಸರ್ಕಾರ ನಿಗದಿಪಡಿಸಿದ ಸಮಯದೊ ಳಗೆ ಪೂರ್ಣಗೊಳಿಸಬೇಕೆಂಬ ಉದ್ದೇಶ ದಿಂದ 2 ರಸ್ತೆಗಳ ನಡುವೆ ಬರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯಾ ಭಾಗದ ಹೊಣೆ ಗಾರಿಕೆಯನ್ನೂ ವಹಿಸುತ್ತಿದ್ದೇವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಕಾಮಗಾರಿ ಪರಿಶೀಲನೆಗೆ ಪ್ರತಿ ತಿಂಗಳು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದರು.