ತವರಿಗೆ ಬಾರದ ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು!

ಮಂಡ್ಯ:  ತವರೂರಿಗೆ ಬಾರದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು ಗೌರಿ- ಗಣೇಶ ಹಬ್ಬದ ಪ್ರಯುಕ್ತ ಬಾಗಿನವನ್ನು ಪೋಸ್ಟ್ ಮುಖಾಂತರ ಕಳುಹಿಸಿ ಕೊಡುವ ಮೂಲಕ ಗೌರಿ ಹಬ್ಬಕೆ ಆಹ್ವಾನಿಸಿದರು.

ನಗರದ ಪ್ರಧಾನ ಅಂಚೆ ಕಚೇರಿ ಮೂಲಕ ಮಾಜಿ ಸಂಸದೆ ರಮ್ಯಾಗೆ ಜಿಲ್ಲಾ ಬಿಜೆಪಿ ಮುಖಂಡರು ಬಾಗಿನ ಉಡುಗೊರೆಯನ್ನು ಕಳುಹಿಸಿಕೊಟ್ಟರು. ಕಳೆದ ಒಂದು ವರ್ಷದಿಂದ ಮಂಡ್ಯದಿಂದ ನಾಪತ್ತೆಯಾಗಿರುವ ರಮ್ಯಾರವರು ಪುನಃ ಮಂಡ್ಯಕ್ಕೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮನವಿ ಮಾಡಿಕೊಂಡರು.

ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗಳಿಗೂ ಮತಚಲಾಯಿಸಲು ಬಂದಿಲ್ಲ. ಗೌರಿ-ಗಣೇಶ ಹಬ್ಬಕ್ಕಾದರೂ ತವರು ಕ್ಷೇತ್ರ ಮಂಡ್ಯಕ್ಕೆ ಆಗಮಿಸಿ, ಜನರ ಕಷ್ಟಕ್ಕೆ ಸ್ಪಂದಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷದಿಂದ ನಾಪತ್ತೆಯಾಗಿರುವ ನೀವು, ಈಗಲಾದರೂ ಆಗಮಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಗೆ ಬಂದಾಗ ಘೇರಾವ್ ಹಾಕುವುದಾಗಿ ಎಚ್ಚರಿಸಿದರು.

ಬಾಗಿನದಲ್ಲಿ ಹೂವು, ಬಳೆ ಹಾಗೂ ತೆಂಗಿನಕಾಯಿ ಸೇರಿದಂತೆ ಎಲ್ಲವನ್ನೂ ಅಂಚೆ ಮೂಲಕ ರಮ್ಯಾಗೆ ರವಾನಿಸಿದ್ದಾರೆ. ಗೌರಿ-ಗಣೇಶ ಹಬ್ಬದ ನೆಪಕ್ಕಾದರೂ ರಮ್ಯಾ ರವರು ತವರು ಜಿಲ್ಲೆಗೆ ಬರುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗಳಲ್ಲಿ ಮತ ಚಲಾಯಿಸದೆ ಭಾರಿ ಟೀಕೆಗೆ ರಮ್ಯಾ ಗುರಿಯಾಗಿದ್ದರು.