ಮಹಾ ರಾಜಕೀಯ ಹೈಡ್ರಾಮ ಕುರಿತು ಹೇಳಿಕೆ: ಅನಂತ್‍ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ನಾಯಕತ್ವ ಗರಂ

ನವದೆಹಲಿ, ಡಿ.2- ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕುರಿತಂತೆ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್‍ಕುಮಾರ್ ಹೆಗಡೆ ಹೇಳಿಕೆ ಬಿಜೆಪಿಯ ಹಿರಿಯ ನಾಯಕರ ಅಸಮಾ ಧಾನಕ್ಕೆ ಕಾರಣವಾಗಿದೆ.ಬಹುಮತದ ಕೊರತೆಯ ಹೊರತಾ ಗಿಯೂ 40,000 ಕೋಟಿ ರೂ.ಗಳ ಕೇಂದ್ರ ನಿಧಿಯನ್ನು ‘ದುರುಪಯೋಗಪಡಿಸಿಕೊಳ್ಳದಂತೆ’ ರಕ್ಷಿಸಲು ಕಳೆದ ತಿಂಗಳು ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಖ್ಯ ಮಂತ್ರಿಯನ್ನಾಗಿ ಮಾಡಲಾಗಿತ್ತು ಎಂಬ ಹೆಗಡೆ ಹೇಳಿಕೆಯ ಕುರಿತು ಬಿಜೆಪಿ ನಾಯಕತ್ವವು ಅಸಮಾಧಾನ ವ್ಯಕ್ತಪಡಿಸಿದೆ.

ಸಂಸದರ ಹೇಳಿಕೆಯ ಬಗೆಗೆ ಅಸಮಾಧಾನವಿದ್ದು ಪಕ್ಷದ ಅಸಮಾಧಾನವನ್ನು ಅವರಿಗೆ ತಿಳಿಸಲಾಗುವುದು ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಫಡ್ನವಿಸ್ ಈಗಾಗಲೇ ಹೆಗಡೆ ಅವರ ಹೇಳಿಕೆಯನ್ನು “ಸಂಪೂರ್ಣ ಅಸತ್ಯ” ಎಂದು ತಳ್ಳಿಹಾಕಿದ್ದಾರೆ, ಆ ರೀತಿಯದ್ದೇನೂ ಸಂಭವಿಸಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ. ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕತ್ವ ಫಡ್ನವೀಸ್ ಅವರನ್ನು ತುರ್ತಾಗಿ ಮುಖ್ಯಮಂತ್ರಿಯಾಗಿಸಿದೆ ಎಂದು ಹೆಗಡೆ ಹೇಳಿದ್ದರು. ಈ ಕುರಿತಂತೆ ಅವರ ಹೇಳಿಕೆಗಳು ‘ಅನಗತ್ಯ’ ಮತ್ತು ನಾಯಕತ್ವದ ‘ಅಸಮಾಧಾನ’ವನ್ನು ಅವರಿಗೆ ತಿಳಿಸಲಾಗುವುದು ಎಂದು ಮುಖಂಡರು ಹೇಳಿದ್ದಾರೆ. ಕಳೆದ ತಿಂಗಳು ಮಹಾರಾಷ್ಟ್ರ ದಲ್ಲಿ ನಡೆದ ರಾಜಕೀಯ ನಾಟಕಕ್ಕೆ ಹೊಸ ತಿರುವನ್ನು ನೀಡಲು ಹೆಗಡೆ ಪ್ರಯತ್ನಿಸಿದ್ದಾರೆ. ಕೇಂದ್ರದ ನಿಧಿಯನ್ನು ರಕ್ಷಿಸುವ ಸಲುವಾಗಿ ಫಡ್ನವೀಸ್ ಮುಖ್ಯಮಂತ್ರಿ ಪದವಿ ಗೇರಿ ದ್ದರು ಎಂದು ಹೆಗಡೆ ಹೇಳಿಕೆ ಇದೀಗ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.