ಹಣಕ್ಕಾಗಿ ಲಾರಿ ತಡೆದು ಬ್ಲಾಕ್‍ಮೇಲ್; ಆರೋಪ

ಮೈಸೂರು: ಕನ್ನಡ ಸಂಘಟನೆಯೊಂದರ ಅಧ್ಯಕ್ಷರೊಬ್ಬರು ತಮ್ಮ ಲಾರಿಯನ್ನು ಬಲವಂತವಾಗಿ ಕೊಂಡೊಯ್ದು ಅದನ್ನು ಮರಳು ಗುಡ್ಡೆ ಬಳಿ ನಿಲ್ಲಿಸಿ ಛಾಯಾಚಿತ್ರ ತೆಗೆದು, ಬಳಿಕ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡಿದ್ದಲ್ಲದೆ ನೀಡದಿದ್ದಾಗ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ತಮ್ಮ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆಂದು ಪಾಂಡವಪುರ ತಾಲೂಕು ಹೊಸ ಯರಗನಹಳ್ಳಿಯ ಎಚ್.ಎನ್. ಪ್ರದೀಪ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

ಜು.10ರಂದು ನಮ್ಮ ಲಾರಿ ಕೆ.ಆರ್.ನಗರ ಸಮೀಪದ ಮುಳ್ಳೂರು ಗ್ರಾಮದಲ್ಲಿ ಎಂ.ಸ್ಯಾಂಡ್ ಸಾಗಿಸುವಂತೆ ಕೇಳಿದರು. ಲಾರಿ ಚಾಲಕ ಇದಕ್ಕೆ ಒಪ್ಪದಿದ್ದಾಗ ಆತನ ಮೇಲೆ ಹಲ್ಲೆ ಮಾಡಿ ಲಾರಿಯನು ಬಲವಂತವಾಗಿ ಕೊಂಡೊಯ್ದು ಮರಳು ಇರುವ ಜಾಗದಲ್ಲಿ ನಿಲ್ಲಿಸಿ, ಛಾಯಾಚಿತ್ರ ತೆಗೆದು ಲಕ್ಷ ರೂ. ನೀಡಿದರೆ ಮಾತ್ರ ಸುಮ್ಮನಿರುವುದಾಗಿ ಬೆದರಿಕೆ ಹಾಕಿದರು ಎಂದು ಬಾವುಕರಾಗಿ ಹೇಳಿದರು.

ಇದಕ್ಕೆ ಒಪ್ಪದಿದ್ದಾಗ ಕೆ.ಅರ್.ನಗರ ಠಾಣೆ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ಲಾರಿಯನ್ನು ಅವರು ವಶಕ್ಕೆ ಪಡೆಯುವಂತೆ ಮಾಡಿದ್ದಾರೆ. ಲಾರಿ ಬಿಡಿಸಿಕೊಡಲು 80 ಸಾವಿರ ರೂ. ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇನೆ. ಸೂಕ್ತ ತನಿಖೆ ಮಾಡಿ ನಿರಪರಾಧಿಯಾದ ತಮ್ಮ ವಿರುದ್ಧದ ಪ್ರಕರಣ ರದ್ದು ಮಾಡಿ, ಲಾರಿ ವಾಪಸು ನೀಡಲು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಲ್ಲಿ ಮನವಿ ಮಾಡಿದರು.