ಡಿಕ್ಕಿ ಹೊಡೆದು ಪರಾರಿಯಾದ ಕಾರು; ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಸಾವು

ಚನ್ನರಾಯಪಟ್ಟಣ, ಜು.14- ಅತಿ ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ತಾಲೂಕು, ಶ್ರವಣಬೆಳ ಗೊಳ-ಚನ್ನರಾಯಪಟ್ಟಣ ಮುಖ್ಯ ರಸ್ತೆ ಹಡೇನಹಳ್ಳಿಯಲ್ಲಿ ಭಾನುವಾರ ನಸುಕಿನ 5.30ರಲ್ಲಿ ಅಪಘಾತ ನಡೆದಿದೆ.

ಶ್ರವಣಬೆಳಗೊಳ ಹೋಬಳಿಯ ಬರಾಳು ಗ್ರಾಮದ ಹೇಮರಾಜು, ಗ್ರಾಮದ ರವಿ, ನಾಗೇಗೌಡ, ಮಂಜು ನಾಥ್ ಅವರೊಂದಿಗೆ ಶ್ರವಣಬೆಳಗೊಳ-ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿರುವ ಹಡೇನಹಳ್ಳಿ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ಕಾರಿನ ಚಾಲಕ ವಾಹನವನ್ನು ನಿರ್ಲಕ್ಷ್ಯದಿಂದ ಚಲಾಯಿಸಿ ಕೊಂಡು ಬಂದು ಹೇಮರಾಜು ಅವರಿಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ನೆಲಕ್ಕೆ ಬಿದ್ದ ಹೇಮರಾಜ್ ಮೇಲೆ ಕಾರಿನ ಹಿಂದಿನ ಚಕ್ರ ಹರಿದಿದ್ದು, 45 ವರ್ಷದ ಹೇಮರಾಜು ಸ್ಥಳದಲ್ಲೇ ಅಸುನೀಗಿದ್ದಾರೆ. ರವಿ, ನಾಗೇಗೌಡ, ಮಂಜುನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಿ.ಡಿ.ರವಿ ಅವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ `ಹಿಟ್ ಅಂಡ್ ರನ್’ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿದ ಕಾರಿನ ಪತ್ತೆಗಾಗಿ ಶೋಧ ನಡೆದಿದೆ.