ಕಾರು ಡಿಕ್ಕಿ: ಇಬ್ಬರು ಯುವಕರ ಸಾವು, ಮತ್ತಿಬ್ಬರಿಗೆ ಗಾಯ

ಮೈಸೂರು,ಜು.17(ಎಂಕೆ)-ಅಪರಿಚಿತ ಕಾರೊಂದು ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣದ ಬಸಲಾಪುರ ಗೇಟ್ ಬಳಿ ಬುಧವಾರ ನಡೆದಿದೆ. ಪಿರಿಯಾಪಟ್ಟಣದ ಪರಿವಾರ ಬೀದಿ ನಿವಾಸಿ, ಕುಮಾರ ನಾಯಕ ಅವರ ಪುತ್ರ ಪ್ರಮೋದ್(18), ಹುಣಸೂರಿನ ಮಂಜುನಾಥ ಬಡಾವಣೆ ನಿವಾಸಿ ರಾಜಣ್ಣ ಅವರ ಪುತ್ರ ದರ್ಶನ್(20) ಮೃತಪಟ್ಟವರು. ಗಾಯಗೊಂಡವರು ವಿನಯ್ ಮತ್ತು ವಿಕಾಸ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತ ಯುವಕ ಪ್ರಮೋದ್ ತನ್ನ ಸ್ನೇಹಿತರೊಂದಿಗೆ ಕಂಪಲಾಪುರದಲ್ಲಿ ಹುಟ್ಟು ಹಬ್ಬ ಆಚರಿಸಲು ಹೋಗುತ್ತಿದ್ದರು. ಇದೇ ವೇಳೆ ಮೃತ ದರ್ಶನ್ ಕೂಡ ಹುಣಸೂರಿನಿಂದ ಪಿರಿಯಾಪಟ್ಟಣದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಅಪರಿಚಿತ ಕಾರೊಂದು ಎರಡೂ ಬೈಕ್‍ಗಳಿಗೂ ಡಿಕ್ಕಿ ಹೊಡೆದಿದೆ ಎಂದು ಪಿರಿಯಾಪಟ್ಟಣ ಠಾಣೆ ಸಬ್ ಇನ್ಸ್‍ಪೆಕ್ಟರ್ ಗಣೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಸಂಬಂಧ ಇನ್ನು ಯಾವುದೇ ದೂರು ದಾಖಲಾಗಿಲ್ಲ.