ಕಾರು ಕಂದಕಕ್ಕೆ ಉರುಳಿ ವ್ಯಕ್ತಿ ಸಾವು: ಕೆಂಪಯ್ಯನಹುಂಡಿ ಬಳಿ ತಿ.ನರಸೀಪುರ ರಸ್ತೆಯಲ್ಲಿ ದುರಂತ

ಮೈಸೂರು, ಡಿ.20(ಆರ್‍ಕೆ)-ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಚಾಲಕ ಗಾಯಗೊಂಡಿರುವ ಘಟನೆ ತಿ.ನರಸೀ ಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ರಾಮಕೃಷ್ಣ ನಗರದ ವಾಸು ಲೇಔಟ್ ನಿವಾಸಿ ನಾಗರಾಜ ಭಟ್(55) ಸಾವನ್ನಪ್ಪಿದವರಾಗಿದ್ದು, ಗಾಯ ಗೊಂಡಿರುವ ಕಾರು ಚಾಲಕ ಪ್ರಫುಲ್ಲಾರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ. ಮೈಸೂರಿನಿಂದ ತಿ.ನರಸೀಪುರ ಕಡೆಗೆ ಹುಂಡೈನ ಐ-20 (ಕೆ.ಎ.03, ಎಎಫ್ 3349) ಕಾರಿನಲ್ಲಿ ಹೋಗುತ್ತಿದ್ದಾಗ ಕೆಂಪಯ್ಯನಹುಂಡಿ ಸಮೀಪ ದರ್ಶನ್ ಫಾರಂ ಬಳಿ ಸೇತುವೆಗೆ ಡಿಕ್ಕಿ ಹೊಡೆದ ಕಾರು ಬೆಳಿಗ್ಗೆ 11 ಗಂಟೆ ವೇಳೆಗೆ ಸುಮಾರು 12 ಅಡಿ ಆಳದ ಕಂದಕಕ್ಕೆ ಉರುಳಿತು. ಪರಿಣಾಮ ಕಾರಿನಲ್ಲಿದ್ದ ನಾಗರಾಜ ಭಟ್ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿಕೊಂಡಿರುವ ತಿ.ನರಸೀಪುರ ಠಾಣೆ ಸಬ್ ಇನ್ಸ್‍ಪೆಕ್ಟರ್ ಶಬ್ಬೀರ್ ಹುಸೇನ್ ತಿಳಿಸಿದ್ದಾರೆ. ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಪ್ರಭಾಕರ ರಾವ್ ಸಿಂಧೆ ಅವರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.