ಹಾಡಹಗಲೇ ಕಾರು ಗಾಜು ಒಡೆದು ಲಕ್ಷ ರೂ. ಕಳವು

ಪಿರಿಯಾಪಟ್ಟಣ, ಫೆ.5(ವೀರೇಶ್)- ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ನಗದನ್ನು ಕಳವು ಮಾಡಿರುವ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವೆಂಕಟೇಶ್ವರ ಗ್ರಾನೈಟ್ ಮತ್ತು ಟೈಲ್ಸ್ ಶೋರೂಂ ಮಾಲೀಕ ಅಣ್ಣಪ್ಪ ಹಣ ಕಳೆದುಕೊಂಡವರು. ಇವರು ಬುಧವಾರ ಮಧ್ಯಾಹ್ನ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಿಂದ 1 ಲಕ್ಷ ರೂ. ಡ್ರಾ ಮಾಡಿ ತಮ್ಮ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿ (ಕೆಎ.12, ಝಡ್ 3191)ನ ಡ್ಯಾಶ್‍ಬೋರ್ಡ್‍ನಲ್ಲಿಟ್ಟು, ಊಟಕ್ಕೆ ಹೋಟೆಲ್‍ಗೆ ಹೋಗಲು ಬಸವೇಶ್ವರ ವೃತ್ತದ ಬಟ್ಟೆ ಅಂಗಡಿ ಮುಂದೆ ಕಾರ್ ನಿಲುಗಡೆ ಮಾಡಿದ್ದರು. ಹೋಟೆಲ್‍ನಲ್ಲಿ ಊಟ ಮುಗಿಸಿ ಬರುವಷ್ಟರಲ್ಲೇ ಕಾರಿನ ಗಾಜು ಒಡೆದು ಡ್ಯಾಶ್ ಬೋರ್ಡ್‍ನಲ್ಲಿದ್ದ 1 ಲಕ್ಷ ರೂ.ಗಳನ್ನು ಎಗರಿಸಿದ ಕಳ್ಳರು ಬಳಿಕ ಬೈಕ್‍ನಲ್ಲಿ ಪರಾರಿಯಾದರು.

ಸುದ್ದಿ ತಿಳಿದು ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಆರ್. ಪ್ರದೀಪ್, ಸಬ್‍ಇನ್ಸ್‍ಪೆಕ್ಟರ್ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ್ದಾರೆ. ನೀಲಿ ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದಿದ್ದ ಮೂವರು ಖದೀಮರಲ್ಲಿ ಇಬ್ಬರು ಕಾರಿನ ಡೋರ್ ತೆಗೆಯಲು ಯತ್ನಿಸಿ ದ್ದಾರೆ. ಸಾಧ್ಯವಾಗದಿದ್ದಾಗ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಡ್ಯಾಶ್‍ಬೋಡ್‍ನಲ್ಲಿದ್ದ ಹಣ ಎಗರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.