ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಬಿರುಸಿನ ಪ್ರಚಾರ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು. ಕಾಮನಕೆರೆ ಹುಂಡಿ, ಹಳೇ ಕೆಸರೆ ಸೇರಿದಂತೆ 12 ಗ್ರಾಮಗಳಲ್ಲಿ ರೋಡ್ ಶೋ ನಡೆಸಿದ ವೇಳೆ ಎಲ್ಲೆಡೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಆರತಿ ಎತ್ತಿ ಅದ್ಧೂರಿಯಾಗಿ ಬರಮಾಡಿಕೊಂಡರು. ಮದ್ಯಾಹ್ನ 1.15ರ ವೇಳೆಗೆ ಕಾಮನಕೆರೆಹುಂಡಿ ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿದರು. ರೋಡ್ ಶೋ ಉದ್ದಕ್ಕೂ ಅವರಿಗೆ ಪುಷ್ಪಾರ್ಚನೆಯ ಸ್ವಾಗತ ದೊರೆಯಿತು. ಸಿಎಂ ಪರ ಘೋಷಣೆ ಕೂಗಿದರು.

ಅಲ್ಲಿಂದ ಹಳೆ ಕೆಸರೆಗೆ ತೆರಳಿ ಮತ ಯಾಚಿಸಿದರು. ಈ ವೇಳೆ ಜೆಡಿಎಸ್ ಕಾಯಕರ್ತರೊಬ್ಬರು ಸಿದ್ದರಾಮಯ್ಯ ಅವರಿಗೆ ಮತ ಹಾಕುವುದಿಲ್ಲ ಎಂದು ಹೇಳುವ ಮೂಲಕ ಸಿದ್ದರಾವiಯ್ಯರನ್ನು ಇರಿಸು ಮುರಿಸು ಉಂಟು ಮಾಡಿತು. ಈ ವೇಳೆ ಕೆಲವರು ಶಾಸಕ ಜಿ.ಟಿ.ದೇವೇಗೌಡರ ಪರ ಘೋಷಣೆ ಕೂಗಿದರು.

ಬಳಿಕ ಸಿಎಂ ಜಯದೇವನಗರ, ಏಕಲವ್ಯನಗರ, ಶ್ಯಾದನಹಳ್ಳಿ, ನಾಗನಹಳ್ಳಿ, ಲಕ್ಷ್ಮೀಪುರ, ಕಳಸ್ತವಾಡಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ಬೆಲವತ್ತ, ಆರ್‍ಬಿಐ ಕಾಲೋನಿ, ಹಿನಕಲ್‍ಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.

ಈ ಸಂದರ್ಭದಲ್ಲಿ ರಾಜು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕಾಂಗ್ರೆಸ್ ಹಿಂದುಳಿದ ವರ್ಗಗಳ ನಗರ ಪ್ರಧಾನ ಕಾರ್ಯದರ್ಶಿ ಧನಪಾಲ್ ಕುರುಬಾರಹಳ್ಳಿ, ಬ್ಲಾಕ್ ಅಧ್ಯಕ್ಷ ಉಮಾಶಂಕರ್, ನಾಗವಾರ ನರೇಂದ್ರ ಹಾಗೂ ಆಯಾ ಭಾಗದ, ಗ್ರಾಮದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.