ಮಾರ್ಚ್ 5ರೊಳಗೆ ಮೈತ್ರಿ ಸರ್ಕಾರ ಪತನ: ಜ್ಯೋತಿಷಿ ವಿದ್ವಾನ್ ಗಣೇಶ ಹೆಗಡೆ ಭವಿಷ್ಯ

ಹುಬ್ಬಳ್ಳಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ವಿದೆ. ಮೈತ್ರಿ ಸರ್ಕಾರದ ಮಿತ್ರರು ಶತ್ರುಗಳಾಗಿ ಸರ್ಕಾರಕ್ಕೆ ಗಂಡಾಂತರ ತರುವ ಸಾಧ್ಯತೆ ಇದೆ. 2019ರ ಮಾರ್ಚ್ 5ರ ಒಳಗಾಗಿ ಸರ್ಕಾರ ಪತನವಾಗಲಿದೆ ಎಂದು ಅಖಿಲ ಕರ್ನಾಟಕ ಜೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಗಣೇಶ ಹೆಗಡೆ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜಾತಕದಲ್ಲಿ ರಾಶಾಧಿಪತಿ ಬುಧ ಅಷ್ಟಮದಲ್ಲಿ ಬಂದಿದ್ದು, ಸಪ್ತಮದಲ್ಲಿ ಶನಿ ಇರುವುದರಿಂದ ಮಿತ್ರರೇ ಶತ್ರುಗಳಾಗಿ ಮೈತ್ರಿ ಸರ್ಕಾರಕ್ಕೆ ಕಂಟಕ ತರಲಿದ್ದಾರೆ ಎಂದರು.

ಸಿದ್ದರಾಮಯ್ಯ ನವರ ಜಾತಕದಲ್ಲಿ ಗ್ರಹಗಳು ಪ್ರಬಲವಾಗಿದ್ದು, ಅವರು ಮುಖ್ಯಮಂತ್ರಿ ಆಗುವ ಆಸೆಯನ್ನು ಹೊಂದಿರುವ ಹಿನ್ನಲೆಯಲ್ಲಿ ಜಾತಕ ಫಲ ನೀಡಲಿದೆ. ಒಂದು ವೇಳೆ ಅವರು ಮುಖ್ಯಮಂತ್ರಿ ಆಗದಿದ್ದರೂ ಯಾರನ್ನಾದರೂ ಮುಖ್ಯಮಂತ್ರಿ ಮಾಡುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ. 2019ರ ಮಾರ್ಚ್ 5ರ ಒಳಗಾಗಿ ಮೈತ್ರಿ ಸರ್ಕಾರ ಖಂಡಿತವಾಗಿಯೂ ಉರುಳುತ್ತದೆ ಎಂದು ಅವರು ತಿಳಿಸಿದರು. ಲೋಕ ಸಭಾ ಚುನಾವಣೆಯಲ್ಲಿ 285 ಕ್ಕಿಂತ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಮೋದಿಯವರು ಮತ್ತೆ ಪ್ರಧಾನಮಂತ್ರಿಯಾಗುವುದು ಖಚಿತ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 15 ಕ್ಕಿಂತ ಹೆಚ್ಚು ಸ್ಥಾನಗಳು ಬರುತ್ತವೆ. ಅಷ್ಟರೊಳಗೆ ಸರ್ಕಾರ ಬಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಆಂತರಿಕ ಜಗಳದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೊಡೆದಾಡಿಕೊಂಡು ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಅವರು ಗಂಭೀರವಾಗಿ ಹೇಳಿದರು.