ಬೈಕ್-ಕಾರ್ ನಡುವೆ ಡಿಕ್ಕಿ: ನವದಂಪತಿ ಆಸ್ಪತ್ರೆಗೆ

ಹುಣಸೂರು: ಒಂದು ದಿನದ ಹಿಂದೆಯಷ್ಟೇ (ಬುಧವಾರ) ಮದುವೆಯಾಗಿದ್ದ ನವ ವಧು-ವರರು ಗುರುವಾರ ಮೈಸೂರಿಗೆ ತೆರಳಿ ಸುತ್ತಾಡಿಕೊಂಡು ವಾಪಸ್ ಮನೆಗೆ ಬರುವಾಗ ಸಂಜೆ ತಾಲೂಕಿನ ಬನ್ನಿಕುಪ್ಪೆ ಬಳಿ ಅಪಘಾತಕ್ಕೀಡಾಗಿ ಮೈಸೂರು ಅಸ್ಪತ್ರೆಗೆ ದಾಖಲಿಸಿದ್ದಾರೆ.

ತಾಲೂಕಿನ ಭರತವಾಡಿ ಗ್ರಾಮದ ವೆಂಕಟಶೆಟ್ಟಿ ಅವರ ಮಗ ಹಾಗೂ ಭಾರತೀಯ ಸೇನೆಯ ಸೇವೆಯಲ್ಲಿರುವ ಕುಮಾರ ಹಾಗೂ ಪತ್ನಿ ರಶ್ಮಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಘಟನೆ ವಿವರ: ಹಾಸನ ನಗರದ ತಣ್ಣೀರಹಳ್ಳ ಬಡಾವಣೆಯ ರಶ್ಮಿ ಜತೆ ಕುಮಾರ್ ಮದುವೆ ಬುಧವಾರ ನಡೆದಿತ್ತು. ಗುರುವಾರ ಗ್ರಾಮಕ್ಕೆ ಬಂದ ಕುಮಾರ್ ತಮ್ಮ (ಕೆಎ.45, ಎಲ್.4389) ಅಪಾಚೆ ಬೈಕ್‍ನಲ್ಲಿ ಪತ್ನಿಯೊಂದಿಗೆ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡಿಕೊಂಡು ವಾಪಸ್ ಗ್ರಾಮಕ್ಕೆ ಬರುವಾಗ ಸಂಜೆ 5 ಗಂಟೆ ಸಮಯದಲ್ಲಿ ಬನ್ನಿಕುಪ್ಪೆ ಬಳಿ ಸಾರಿಗೆ ಸಂಸ್ಥೆಯ ಬಸ್ ಹಿಂದೆ ಹಾಕಲು ಯತ್ನಿಸಿದಾಗ ಹುಣಸೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ (ಕೆ.ಎ-12, 4039) ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಕುಮಾರ್ ತಲೆಗೆ ಪೆಟ್ಟು ಬಿದ್ದಿದ್ದರೆ, ರಶ್ಮಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾಳೆ ಬೀಗರ ಔತಣಕೂಟ ಮತ್ತು ಆರತಕ್ಷತೆ ಕಾರ್ಯಕ್ರಮ ತಾಲೂಕಿನ ಭರತವಾಡಿ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದೆ.