ಮೈಸೂರು ಪಾಲಿಕೆ ವಾರ್ಡ್ ನಂ.22ರಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ

Mysuru City Corporation

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.22ರಲ್ಲಿ ಕಣದಲ್ಲಿ ಇರುವವರು ಇಬ್ಬರೇ ಅಭ್ಯರ್ಥಿಗಳು! ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಿದ್ದ ಈ ವಾರ್ಡಿನಲ್ಲಿ ಇದೀಗ ಜೆಡಿಎಸ್‍ನಿಂದ ನಮ್ರತಾ ರಮೇಶ್ ಹಾಗೂ ಕಾಂಗ್ರೆಸ್‍ನಿಂದ ಡಿ.ಸುಲೋಚನಾ ನಡುವೆ ನೇರ ಹಣಾಹಣಿ. ಬಿಜೆಪಿಯಿಂದ ತೇಜಸ್ವಿನಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಗಳು ಹಿಂದುಳಿದ ವರ್ಗ (ಎ) ಸೇರಿದ್ದರೆ, ಬಿಜೆಪಿಯ ತೇಜಸ್ವಿನಿ ಹಿಂದುಳಿದ ವರ್ಗ (ಬಿ)ಗೆ ಸೇರಿದ್ದರು. ಹಿಂದುಳಿದ ವರ್ಗ (ಎ) ಮಹಿಳೆ ಯಾರೂ ಇಲ್ಲದೇ ಇದ್ದಲ್ಲಿ ಮಾತ್ರ ಹಿಂದು ಳಿದ ವರ್ಗ (ಬಿ) ಮಹಿಳೆ ಸ್ಪರ್ಧೆಗೆ ಅವಕಾಶವಿತ್ತು. ಆದರೆ ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್‍ನಿಂದ ಹಿಂದುಳಿದ ವರ್ಗ (ಎ) ಮಹಿಳಾ ಅಭ್ಯರ್ಥಿಗಳು ಇದ್ದ ಕಾರಣ, ಹಿಂದುಳಿದ ವರ್ಗ (ಬಿ) ಮಹಿಳೆಗೆ ಅವಕಾಶ ಕಲ್ಪಿಸಲು ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ಅವರು ಕಣದಿಂದ ಹೊರಗೆ ಉಳಿಯುವಂತಾಗಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಚುನಾವಣಾ ಧಿಕಾರಿ ವಿ.ಪ್ರಿಯದರ್ಶಿನಿ, ಹಿಂದುಳಿದ ವರ್ಗ (ಎ) ಮಹಿಳಾ ಸ್ಪರ್ಧಿಗಳು ಯಾರೂ ಇಲ್ಲದೇ ಇದ್ದಲ್ಲಿ ಹಿಂದುಳಿದ ವರ್ಗ (ಬಿ) ಮಹಿಳೆಗೆ ಸ್ಪರ್ಧೆ ಮಾಡಲು ಅವಕಾಶವಿತ್ತು. ಆದರೆ ಅದಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಹಿಂದುಳಿದ ವರ್ಗ (ಎ)ಗೆ ಸೇರಿದ ಅಭ್ಯರ್ಥಿಗಳು ಇದ್ದ ಕಾರಣ ಬಿಜೆಪಿ ಅಭ್ಯರ್ಥಿಗೆ ಅವಕಾಶ ಇಲ್ಲವಾಯಿತು. ಹೀಗಾಗಿ ಅವರ ನಾಮಪತ್ರವನ್ನು ಅವರಿಗೆ ಹಿಂದಿರುಗಿಸಲಾಗಿದೆ. ಈ ರೀತಿಯ ಸನ್ನಿ ವೇಶದಲ್ಲಿ ನಾಮಪತ್ರ ತಿರಸ್ಕøತ ಎಂದು ಕರೆಯಲಾಗದು. ಹಿಂದಿರುಗಿಸಲಾಗಿದೆ ಎಂದೇ ಉಲ್ಲೇಖಿಸಬೇಕು ಎಂದು ಮಾಹಿತಿ ನೀಡಿದರು.