ಶಾಸಕ ರಾಮಲಿಂಗಾರೆಡ್ಡಿ ಮೂಲಕ ಅತೃಪ್ತರಿಗೆ ಗಾಳ

ಬೆಂಗಳೂರು, ಜು.20- ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮುಂಬೈಯಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರನ್ನು ರಾಮಲಿಂಗಾರೆಡ್ಡಿ ಮೂಲಕ ಸಂಪರ್ಕಿಸುವ ಪ್ರಯತ್ನ ವನ್ನು ದೇವೇಗೌಡರು ಮಾಡಿದರು, ಆದರೆ ಅತೃಪ್ತ ಶಾಸಕರು ರೆಡ್ಡಿ ಅವರ ಮೊಬೈಲ್ ಕರೆ ಸ್ವೀಕರಿಸದ ಕಾರಣ ಈ ಪ್ರಯ ತ್ನವೂ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ರೆಡ್ಡಿ, ನನಗೆ ಉಪಮುಖ್ಯಮಂತ್ರಿ ಹುದ್ದೆ ಬೇಡ. ದೇವೇ ಗೌಡರ ಜೊತೆ ನಡೆಸಿದ ಮಾತುಕತೆಯಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಚರ್ಚೆ ನಡೆದಿಲ್ಲ. ಇದೊಂದು ಸೌಜನ್ಯದ ಭೇಟಿ ಅಷ್ಟೇ. ರಾಜಕೀಯದಲ್ಲಿರುವಾಗ ದೇವೇಗೌಡರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ಹಾಗೆಯೇ ಇಂದು ಕೂಡ ಭೇಟಿಯಾಗಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಅತೃಪ್ತ ಶಾಸಕರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಸೋಮಶೇಖರ್ ಹೇಳಿದ ಎಲ್ಲಾ ಮಾತು ಸತ್ಯ. ನಾವೆಲ್ಲಾ ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದೆವು. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಬಾರದು ಎಂದು ತೀರ್ಮಾನವಾಗಿತ್ತು. ಆದರೆ ನಮ್ಮ ಪಕ್ಷದ ಹಿರಿಯ ನಾಯಕರ ಒತ್ತಡ, ಜನರ ಒತ್ತಡದಿಂದಾಗಿ ರಾಜೀನಾಮೆ ವಾಪಸ್ ಪಡೆದಿದ್ದೇನೆ. ಭಾನುವಾರ ಕೂಡ ಶಾಸಕ ಸೋಮಶೇಖರ್ ಅವರ ಜೊತೆ ಮಾತನಾಡಿದ್ದೆ. ಆನಂತರ ಅವರು ತಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.

ಎಂಟಿಬಿ ನಾಗರಾಜ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ನಾನು ನಾಗರಾಜ್ ಅವರನ್ನು ಭೇಟಿಯಾಗಿಲ್ಲ. ಎಚ್.ವಿಶ್ವನಾಥ್ ಅವರನ್ನು ಒಂದು ಬಾರಿ ಭೇಟಿಯಾಗಿದ್ದೆ ಎಂದ ರಾಮಲಿಂಗಾರೆಡ್ಡಿ, ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ಅನೇಕ ಜನ ಡಿಸಿಎಂ ಆಗಬೇಕು ಎಂಬ ಆಸೆ ಇಟ್ಟುಕೊಂಡವರಿದ್ದಾರೆ. ಆದರೆ ನನಗೆ ಈ ರೀತಿಯ ಯಾವುದೇ ಆಸೆ ಇಲ್ಲ. ಡಿಸಿಎಂ ಹುದ್ದೆ ಕೊಟ್ಟರೂ ನನಗೆ ಬೇಡ ಎಂದರು. ರಾಮಲಿಂಗಾರೆಡ್ಡಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ಇತ್ತೀಚೆಗೆ ರಾಜೀ ನಾಮೆ ನೀಡಿದ್ದರು. ಬಳಿಕ ಪಕ್ಷದ ಹಿರಿಯ ನಾಯಕರ ಮನವೊಲಿಕೆಯ ನಂತರ ರಾಜೀನಾಮೆ ವಾಪಸ್ ಪಡೆದು, ಅಧಿವೇಶನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.