ಸಂಬಳಕ್ಕಾಗಿ `ಡಿ’ ಗ್ರೂಪ್ ನೌಕರರ ಪ್ರತಿಭಟನೆ

ಮದ್ದೂರು: ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ `ಡಿ’ ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನಮಗೆ 11 ತಿಂಗಳಿಂದ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಡಿ ಗ್ರೂಪ್ ನೌಕರರು ಪ್ರತಿಭಟನೆ ಮಾಡಿದರು.

ಆಸ್ಪತ್ರೆ ಎದುರು ಜಮಾಯಿಸಿದ ನೌಕರರು ಸಂಬಳ ನೀಡದ ಏಜೆನ್ಸಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚೇತನ್‍ಕುಮಾರ್ ಮಾತನಾಡಿ, 11 ತಿಂಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 23 ನೌಕಕರಿಗೆ ಸಂಬಳ ನೀಡುತ್ತಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಹೀಗಾಗಿ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಎಲ್ಲಿಗೆ ಹೋಗಬೇಕು ಎಂಬುದೇ ನಮಗೆ ಗೊತಿಲ್ಲವೆಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಶೀಘ್ರವಾಗಿ ನಮಗೆ ಸಂಬಳ ಮಂಜೂರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಆರೋಗ್ಯಾಧಿಕಾರಿ ವಿಜಯ ನರಸಿಂಹ ಸ್ಥಳಕ್ಕಾಗಮಿಸಿ ನಿಮ್ಮಗಳ ಸಂಬಳದ ಬಿಲ್‍ಗಳನ್ನು ಕಳುಹಿಸಿ ಶೀಘ್ರವಾಗಿ ನಿಮಗೆ ಸಂಬಳ ಬರುವಂತೆ ಕ್ರಮ ಕೈಗೊಳ್ಳಲಾಗ ವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪದೆ ಪ್ರತಿಭಟನೆ ಮುಂದುವರೆಸಿ ದ್ದಾರೆ. ಪ್ರತಿಭಟನೆಯಲ್ಲಿ ಮಂಜೇಶ್, ಉಮೇಶ್, ಕುಮಾರ್, ಸೌಮ್ಯ, ಶೋಭಾ, ನವೀನ್, ಭಾಗ್ಯ, ಸಹನ, ಗೋವಿಂದು, ಶಾಂತಲಾ ಸೇರಿದಂತೆ ಇನ್ನಿತರರಿದ್ದರು.