ಸೈನಿಕ ತರಬೇತಿ ಪಡೆದವರಿಗೆ ಉಚಿತ ಸಮವಸ್ತ್ರ ವಿತರಣೆ

ಮೈಸೂರು,ಡಿ.28(ಎಂಕೆ)-ಸೈನಿಕ ರಾಜ್ಯ ಅಕಾಡೆಮಿ, ಹೊಯ್ಸಳ ಕರ್ನಾಟಕ ಸಂಘದ ಸಹಯೋಗದಲ್ಲಿ 30 ದಿನಗಳ ಉಚಿತ ಸೈನಿಕ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಉಚಿತ ಸಮವಸ್ತ್ರ(ಟ್ರ್ಯಾಕ್‍ಸೂಟ್), ಅಭಿನಂದನಾ ಪದಕ ನೀಡಿ ಗೌರವಿಸಲಾಯಿತು. ನಗರದ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ಶಿಬಿರಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಾಯು ಸೇನೆಯ ನಿವೃತ್ತ ಯೋಧ ಶಂಕರನಾರಾಯಣ, ಶಿಬಿರಾರ್ಥಿಗಳಿಗೆ ಉಚಿತ ಟ್ರ್ಯಾಕ್ ಸೂಟ್ ಹಾಗೂ ಅಭಿನಂದನಾ ಪದಕಗಳನ್ನು ನೀಡಿದರು. ಈ ವೇಳೆ ಸೈನಿಕ ರಾಜ್ಯ ಅಕಾಡೆಮಿಯ ಯೋಧ ಆರ್.ರವಿ ಮಾತನಾಡಿ, ಕೆಲಸದಿಂದ ರಜೆ ಮೇಲೆ ಬಂದಾಗ ಯುವಕರಿಗೆ ಸೈನಿಕರಿಗೆ ನೀಡುವಂತಹ ತರಬೇತಿ ನೀಡಿ, ಮುಂದಿನ ಸೈನಿಕರಾಗುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಇಂದು 2ನೇ ಬ್ಯಾಚ್‍ನಲ್ಲಿ ತರಬೇತಿ ಪಡೆದ 30 ಯುವಕರಿಗೆ ಉಚಿತ ಟ್ರ್ಯಾಕ್ ಸೂಟ್ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಸಹ ಕರಿಸಲಾಗುತ್ತಿದೆ. ಮುಖ್ಯವಾಗಿ ಯುವಕರು ತಂದೆ-ತಾಯಿ, ಗುರು ಮತ್ತು ದೇಶಕ್ಕೆ ಸದಾ ಗೌರವ ನೀಡಬೇಕು. ಶಿಸ್ತು, ಸಂಯಮದಿಂದ ವರ್ತಿಸಬೇಕು. ಅಲ್ಲದೆ ಇತರರಿಗೆ ಮಾದರಿಯಾಗುವಂತೆ ಬದುಕಬೇಕು. ಸೇನೆಗೆ ಸೇರಿ ದೇಶಸೇವೆ ಯನ್ನು ಮಾಡಬೇಕು ಎಂದು ಹುರಿದುಂಬಿಸಿದರು. ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.