ನಾಗರಿಕ ಸೌಕರ್ಯ ನಿವೇಶನಗಳ ಮಂಜೂರಾತಿಯಲ್ಲಿ ಮುಡಾದಿಂದ ಮೂಲ ಉದ್ದೇಶವೇ ಮಣ್ಣು ಪಾಲು!?

ಮೈಸೂರು: ಸಮಾಜದ ಹಿತಸಾಧನೆಗೆ ಸರ್ಕಾರ ತೆಗೆದು ಕೊಂಡಂತಹ ನಿರ್ಧಾರ-ನಿಲುವು ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಪ್ರಮುಖವಾದದ್ದು. ಆದರೆ ಈ ಎರಡು ವರ್ಗಗಳೊಂದಿಗೆ ಪ್ರಭಾವಿ ವ್ಯಕ್ತಿಗಳು ಸೇರಿ ಸರ್ಕಾರದ ಮೂಲ ಉದ್ದೇಶವನ್ನೇ ಬುಡಮೇಲು ಮಾಡು ತ್ತಿರುವ ಪರಿಣಾಮ ಸಾರ್ವಜನಿಕ ಹಿತಾಸಕ್ತಿ ಮಣ್ಣುಪಾಲಾಗುತ್ತಿದೆ.

ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಈ ಆರೋಪಕ್ಕೊಂದು ತಾಜಾ ಉದಾಹರಣೆ ಮೈಸೂರಿನಲ್ಲಿದೆ. ಸರ್ಕಾರದ ಅಧೀನ ಸಂಸ್ಥೆ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ) ನಾಗರಿಕ ಸೌಕರ್ಯ(ಸಿಎ) ನಿವೇಶನಗಳ ಮಂಜೂರಾತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮಾಯವಾದಂತಿದೆ. ಮುಡಾ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಸಮಾಜ, ಸಮುದಾಯದ ಅನುಕೂಲ ಕ್ಕಾಗಿ `ನಾಗರಿಕ ಸೌಕರ್ಯ(ಸಿಎ)’ ನಿವೇಶನಗಳನ್ನು ಮೀಸಲಿಡುವ ಪದ್ಧತಿ ಆರಂಭದಿಂದಲೂ ನಡೆದುಬಂದಿದೆ. ಆದರೆ ಹೀಗೆ ಸಮಾಜದ ಹಿತಾಸಕ್ತಿಗಾಗಿ ಮೀಸ ಲಿಡುವ ಬೃಹತ್ ನಿವೇಶನಗಳ ಮಂಜೂ ರಾತಿ ಸಂದರ್ಭದಲ್ಲಿ ಮೂಲ ಉದ್ದೇಶ ವನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಸರ್ಕಾರಿ ಇಲ್ಲವೆ ಸಹಕಾರಿ ನಿಯಮ, ನಿಬಂಧನೆಗೆ ಒಳಪಟ್ಟು ಅಸ್ತಿತ್ವಕ್ಕೆ ಬಂದಿ ರುವ ಸಂಘ ಸಂಸ್ಥೆಗಳು, ಟ್ರಸ್ಟ್‍ಗಳಿಗೆ ಇಂತಹ ನಾಗರಿಕ ಸೌಕರ್ಯ ನಿವೇಶನ ಗಳನ್ನು ಕಲ್ಪಿಸುವುದು ಒಂದು ಉತ್ತಮ ಕಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಸಿಎ ನಿವೇಶನ ಮಂಜೂರಾತಿಯಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕøತಿಕ ಇನ್ನಿತರೆ ಸಾಮುದಾಯಿಕ ಉದ್ದೇಶಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಆದರೆ ಸಾರ್ವಜನಿಕ ಇಲ್ಲವೇ ಸಮುದಾಯದ ಹಿತಾಸಕ್ತಿಗೆ ಅನುವಾಗುವ ಉದ್ದೇಶಕ್ಕೆ ಸಿಎ ನಿವೇಶನ ಬಳಸಿಕೊಳ್ಳಬೇಕೆಂಬ ನಿಯಮ -ನಿಬಂಧನೆಗೆ ಬೆಲೆಯೇ ಇಲ್ಲದಂತಾಗಿದೆ. ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪ್ರಭಾವಿಗಳ ಸಹಕಾರದಿಂದ ಸಿಎ ನಿವೇ ಶನಗಳು ದುರ್ಬಳಕೆಯಾಗುತ್ತಿವೆ. ಶಿಕ್ಷಣ, ಆರೋಗ್ಯದಂತಹ ಸಮಾಜ ಪರ ಸೇವೆ ಗಾಗಿ ಬಳಸಿಕೊಳ್ಳಬೇಕಿರುವ ನಿವೇಶನ ಗಳಲ್ಲಿ ಸಮುದಾಯ ಭವನ ಹೆಸರಿನ ಲಾಭ ತರುವ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ಸಮಾಜ ಹಾಗೂ ಸಮುದಾಯಕ್ಕೆ ಯಾವ ರೀತಿಯ ಪ್ರಯೋಜನವೂ ಇಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ.

ನಿಯಮಾವಳಿಯಂತೆ ನಿರ್ದಿಷ್ಟ ಉದ್ದೇಶಕ್ಕೆ ಬಳಸದೇ ಇದ್ದಲ್ಲಿ ಅಂತಹ ಸಿಎ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಪೂರ್ಣ ಅಧಿಕಾರ ಪ್ರಾಧಿಕಾರಕ್ಕಿದೆ. ಆದರೆ ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ. ನಿಯ ಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕೆಂದು ಆದೇಶಿಸಿರುವ ಹಾಗೂ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವ ಒಂದೇ ಒಂದು ನಿದರ್ಶ ನವಿಲ್ಲ. ಮುಡಾ ಕೆಲ ವರ್ಷಗಳಿಂದ ಹಂಚಿಕೆ ಮಾಡಿರುವ ಸಿಎ ನಿವೇಶನ ಗಳಲ್ಲಿ ಬಹುತೇಕ ನಿಯಮ ಉಲ್ಲಂಘನೆ ಯಾಗಿರುವುದು ಕಂಡುಬರುತ್ತಿದೆ. ಮುಡಾ ಆಡಳಿತ ಮಂಡಳಿ ಸಭೆಯಲ್ಲಿ, ನಿವೇಶನ ಗಳನ್ನು ಪಡೆದವರೇ ನಿಯಮಾವಳಿ ಉಲ್ಲಂ ಘಿಸಿರುವ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೂ ಕ್ರಮ ಕೈಗೊಳ್ಳಲಾಗದ ಸ್ಥಿತಿ ಮುಡಾದಲ್ಲಿದೆ.

ಮತ್ತೊಂದು ಅತೀ ಮುಖ್ಯ ವಿಚಾರ ವೆಂದರೆ ಮೈಸೂರು ನಗರಾಭಿವೃದ್ದಿ ಪ್ರಾಧಿ ಕಾರ, ಸಿಎ ನಿವೇಶನಗಳ ಹಂಚಿಕೆಯಲ್ಲಿ ಅನುಸರಿಸುತ್ತಿರುವ ಮಾನದಂಡವಾದರೂ ಏನು ಎಂಬುದು ಬಹುದೊಡ್ಡ ಪ್ರಶ್ನೆ ಯಾಗಿದೆ. ಕಳೆದ ಮೂರ್ನಾಲ್ಕು ದಶಕ ಗಳಿಂದ ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿ ಬೃಹತ್ ಪ್ರಮಾಣದ ಸಿಎ ನಿವೇಶನಗಳನ್ನು ಕಾಯ್ದಿರಿಸಿದ್ದು, ಅವುಗಳಲ್ಲಿ ಬಹುತೇಕ ಹಂಚಿಕೆ ಕೂಡ ಮಾಡಲಾಗಿದೆ. ಇಂತಹ ನಿವೇಶನ ಪಡೆದ ಸಂಘ-ಸಂಸ್ಥೆ, ಟ್ರಸ್ಟ್ ಯಾವುದೇ ಇರಬ ಹುದು, ಆದರೆ ಮೂಲ ಉದ್ದೇಶಕ್ಕೆ ಬಳಸಿ ಕೊಳ್ಳಲಾಗಿದೆಯೇ ಎಂಬ ಕನಿಷ್ಠ ಕಾಳಜಿ ಮುಡಾಗೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ ಕಾಯ್ದಿರಿಸಿದ ಸಿಎ ನಿವೇಶನಗಳಲ್ಲಿ ಸಾಕಷ್ಟು ಕಲ್ಯಾಣ ಮಂಟಪಗಳು ತಲೆಯತ್ತಿವೆ. ವಿಜಯನಗರ 1, 2, 3ನೇ ಹಂತ, ಹೆಬ್ಬಾಳು, ಕನಕದಾಸನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಅಕ್ಕಪಕ್ಕದಲ್ಲೇ `ಕಲ್ಯಾಣ ಮಂಟಪ’ಗಳು ನಿರ್ಮಾಣವಾಗಿರುವುದು ಬೃಹತ್ ಸಿಎ ನಿವೇಶನಗಳಲ್ಲೇ. ಹೀಗೆ ನಿರ್ಮಾಣವಾಗುವ ಕಲ್ಯಾಣ ಮಂಟಪಗಳಿಂದ ಸಮಾಜ ಇಲ್ಲವೆ ಸಮುದಾಯದ ಹಿತ ಸಾಧನೆ ಹೇಗೆ ಸಾಧ್ಯ?. ಇಂತಹ ಕಲ್ಯಾಣ ಮಂಟಪಗಳನ್ನು ಬಡ, ಮಧ್ಯಮ ವರ್ಗದವರಿಗೆ ಉಚಿತವಾಗಿ ನೀಡುವು ದಿರಲಿ, ರಿಯಾಯಿತಿಯನ್ನಾದರೂ ನೀಡ ಲಾಗುತ್ತಿದೆಯೇ?. ಇಂತಹ ಕಲ್ಯಾಣ ಮಂಟಪದ ಬಾಡಿಗೆಯನ್ನಾದರೂ ನಿಗದಿ ಮಾಡಲಾಗಿದೆಯೇ?. ಇಲ್ಲ. ದಿನಕ್ಕೆ ಲಕ್ಷ ಲಕ್ಷ ಬಾಡಿಗೆ ಸಂಪಾದಿಸುವ ಇಂತಹ ಕಲ್ಯಾಣ ಮಂಟಪಗಳಿಂದ ಸಮಾಜಕ್ಕೆ ಎಳ್ಳಷ್ಟೂ ಉಪಯೋಗವಿಲ್ಲ. ಹೀಗಿರು ವಾಗ ಇದೊಂದು `ಸುಲಿಗೆ’ಯಲ್ಲದೆ ಮತ್ತಿ ನ್ನೇನು?. ಕಲ್ಯಾಣ ಮಂಟಪ ನಿರ್ಮಾ ಣಕ್ಕೆ ಸಿಎ ನಿವೇಶನವನ್ನು ಕಲ್ಪಿಸಿಕೊಡು ವುದರ ಹಿಂದಿನ ಉದ್ದೇಶವಾದರೂ ಏನು? ಎಂಬ ಸಾರ್ವಜನಿಕರ ಆಕ್ರೋ ಶದ ಪ್ರಶ್ನೆಗೆ ಉತ್ತರ ಬೇಕಿದೆ.

ಶಿಕ್ಷಣ, ಕಲೆ, ಸಾಹಿತ್ಯ, ಆರೋಗ್ಯ ಉದ್ದೇಶಕ್ಕೆ ಸಿಎ ನಿವೇಶನ ಕಲ್ಪಿಸುವಂತೆ ಮನವಿ ಮಾಡಿದರೆ ಆ ಬಗ್ಗೆ ಮುಡಾ ಆಡಳಿತ ಮಂಡಳಿ ಗಮನ ಕೊಡುವು ದಿಲ್ಲ. ಆದರೆ ಇಂತಹ ಕಲ್ಯಾಣ ಮಂಟಪ ಗಳಿಗೆ ಮಾತ್ರ ಯಾವುದೇ ಸಾಧಕ-ಬಾಧಕಗಳನ್ನೂ ಎಣಿಸದೆ, ಆದ್ಯತೆ ಮೇರೆಗೆ ನಿವೇಶನ ಮಂಜೂರಾತಿ ಮಾಡು ತ್ತದೆ. ಇದರ ಮೂಲ ಶಕ್ತಿ ಯಾವುದಿ ರಬಹುದು. ಸಾಮುದಾಯಿಕ ಹಿತಾಸಕ್ತಿ ಉದ್ದೇಶದೊಂದಿಗೆ ಕಾರ್ಯನಿರ್ವಹಿ ಸುವ ಸಂಘ ಸಂಸ್ಥೆಗಳು, ಟ್ರಸ್ಟ್‍ಗಳಿಗೆ ಆದ್ಯತಾನುಸಾರ ಸಿಎ ನಿವೇಶನಗಳನ್ನು ಮಂಜೂರು ಮಾಡಬೇಕಿತ್ತು. ಆದರೆ ಮಂಡಳಿಯಲ್ಲೇ ಇರುವ ಪ್ರಭಾವಿಗಳ `ಪ್ರಭಾವ’ಕ್ಕೆ ಮಣಿದು. ಸಮಾಜದ, ಸಾರ್ವಜನಿಕ ಹಿತಾಸಕ್ತಿ ಗಾಳಿಗೆ ತೂರಿ ಕೇವಲ ಒಬ್ಬ ವ್ಯಕ್ತಿ ಇಲ್ಲವೇ ಒಂದು ಕುಟುಂ ಬದ ಹಿತಸಾಧನೆಗಾಗಿ ಸಿಎ ನಿವೇಶನ ಗಳನ್ನು ಮಂಜೂರು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವೂ ಸಹ ಸಾರ್ವ ಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮೈಸೂರು ವಿಜಯನಗರ 1 ಮತ್ತು ಎರಡನೇ ಹಂತದಲ್ಲೇ ಅನೇಕ ಭವ್ಯ ಕಲ್ಯಾಣ ಮಂಟಪಗಳು ನಿರ್ಮಾಣ ವಾಗಿರುವುದು ಆರೋಪವನ್ನು ಸಾಕ್ಷೀಕ ರಿಸುತ್ತದೆ. ಸವಿಸ್ತಾರ ನಿವೇಶನ ದಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾ ಗಿರುವ ಇಂತಹ ಕಲ್ಯಾಣ ಮಂಟಪ ಗಳಲ್ಲಿ ದಿನವೊಂದಕ್ಕೆ ಲಕ್ಷಾಂತರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಆಸ್ತಿ ಹಾಗೂ ಇನ್ನಿತರೆ ಅಲ್ಪ ಸ್ವಲ್ಪ ತೆರಿಗೆಯನ್ನೆನೋ ಇಂತಹ ಕಲ್ಯಾಣ ಮಂಟಪಗಳು ತೆರುತ್ತಿವೆ. ಅಧಿಕ ಲಾಭಗಳಿಕೆ ಇವುಗಳ ಉದ್ದೇಶ ವಾಗಿದೆಯೇ ಹೊರತು, ಇದರಲ್ಲಿ ಸಮಾಜದ ಹಿತಾಸಕ್ತಿ ಕಿಂಚಿತ್ತೂ ಇಲ್ಲ.

ಸಿಎ ನಿವೇಶನಗಳಲ್ಲಿ ಲಾಭಾಪೇಕ್ಷಿತ ಕಲ್ಯಾಣ ಮಂಟಪಗಳು ನಿರ್ಮಾಣವಾ ಗುತ್ತಿರುವುದು ಗೌಪ್ಯ ವಿಚಾರವೇನಲ್ಲ. ಹೀಗಿರುವಾಗ ಇದಕ್ಕೆ ಕಡಿವಾಣ ಹಾಕಲು ಮುಡಾ ಮುಂದಾಗದಿರುವುದು ಸಾರ್ವ ಜನಿಕರ ಆಕ್ರೋಶ ಹೆಚ್ಚಿಸಿದೆ. ಸಿಎ ನಿವೇ ಶನ ಹಂಚಿಕೆ ಸಂದರ್ಭದಲ್ಲಿ ಸಮಾ ಜದ ಮೂಲ ಬೇಡಿಕೆ ಅನು ಸಾರವಾಗಿ ಅತ್ಯವಶ್ಯ ಉದ್ದೇಶಕ್ಕೆ ಆದ್ಯತೆ ನೀಡಬೇಕು.

ಹೆಬ್ಬಾಳ್‍ನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲ್ಯಾಣ ಭವನದ ಮಾದರಿ ಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಪ್ರತಿ ಬಡಾವಣೆಗೆ ಅಗ ತ್ಯಾನುಸಾರ ಕಲ್ಯಾಣ ಭವನ ನಿರ್ಮಿಸಿ, ಕಡಿಮೆ ಬಾಡಿಗೆ ನಿಗದಿಪಡಿಸಿದರೆ ಬಡ ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲ ಮಾಡಿ ಕೊಟ್ಟಂತಾಗುತ್ತದೆ. ಅದನ್ನು ಬಿಟ್ಟು, ಕಲ್ಯಾಣ ಮಂಟಪಕ್ಕೆ ಸಿಎ ನಿವೇಶನ ಕಲ್ಪಿಸುವುದು ಸರಿಯಲ್ಲ. ಇದರಿಂದ ಶಿಕ್ಷಣ, ಸಾಂಸ್ಕøತಿಕ, ಸಾಹಿತ್ಯ, ಕಲೆ, ಆರೋಗ್ಯ ಇನ್ನಿತರ ಸೇವೆಗಳಿಗೆ ಸ್ಥಳಾ ವಕಾಶವೇ ಇಲ್ಲದಂತಾಗುವ ಆತಂಕ ಸಾರ್ವಜನಿಕರದ್ದು.