ವಿದ್ಯುತ್ ಸ್ಪರ್ಶ: ಹೆಣ್ಣಾನೆ ಸಾವು

ಗುಂಡ್ಲುಪೇಟೆ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಹೆಣ್ಣಾನೆ ಯೊಂದು ಬೆಳೆ ರಕ್ಷಣೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್ ಬೇಲಿಯ ಸ್ಪರ್ಶದಿಂದ ಸಾವಿಗೀಡಾ ಗಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನಡೆದಿದೆ.

ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ಅರಣ್ಯ ವಲಯದ ದೊಡ್ಡಬರಗಿ ಗ್ರಾಮದ ಹೊರವಲಯದದಲ್ಲಿರುವ ಮಹೇಶ್ ಎಂಬುವರ ಜಮೀನಿನ ಬಳಿ ಅಕ್ರಮ ವಾಗಿ ಅಳವಡಿಸಿದ್ದ ವಿದ್ಯುತ್ ಸ್ಪರ್ಶದಿಂದ ಸುಮಾರು 25 ವರ್ಷ ವಯಸ್ಸಿನ ಹೆಣ್ಣಾನೆ ಸಾವಿಗೀಡಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಎಸಿಎಫ್ ಕೆ.ಪರಮೇಶ್, ಆರ್.ಎಫ್.ಒ ಸಂದೀಪ್ ಭೇಟಿ ನೀಡಿದ್ದರು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರನ್ನು ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.