ಶಬರಿಮಲೆಗೆ ಸ್ತ್ರೀಯರ ಪ್ರವೇಶ: ಪಾಲಿಬೆಟ್ಟದಲ್ಲಿ ಬೃಹತ್  ಪ್ರತಿಭಟನಾ ಮೆರವಣಿಗೆ

ಸಿದ್ದಾಪುರ: ಶಬರಿಮಲೆ ಪ್ರಕರಣ ಕುರಿತು ಸುಪ್ರೀಂಕೋರ್ಟ್‍ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ವಿಫಲವಾಗಿರುವ ಕೇರಳ ಸರಕಾರದ ವಿರುದ್ಧ ಪಾಲಿಬೆಟ್ಟ ಗ್ರಾಮದಲ್ಲಿ ಅಯ್ಯಪ್ಪ ಭಕ್ತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲಿಬೆಟ್ಟ ಹಾಗೂ ಚನ್ನಯ್ಯನಕೊಟೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಪುರುಷರು ಮೆರವಣೆಗೆಯಲ್ಲಿ ಭಾಗವಹಿಸಿದ್ದರು.

ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿ ಭಟನಾ ಸಭೆಯಲ್ಲಿ ಕೇರಳ ರಾಜ್ಯದ ಕಣ್ಣೂರು ಹಿಂದೂ ಐಕ್ಯವೇದಿಕೆಯ ಜಿಲ್ಲಾಧ್ಯಕ್ಷ ಮಣಿ ವರ್ಣನ್ ಮಾತನಾಡಿ, ಶಬರಿಮಲೆಗೆ ಸ್ತ್ರೀಯ ರಿಗೆ ಪ್ರವೇಶ ನೀಡಬೇಕೆಂದು ಸುಪ್ರೀಂ ನೀಡಿರುವ ತೀರ್ಪು ಹಿಂದೂ ಧರ್ಮದ ಮೇಲಿನ ಸವಾರಿಯಾಗಿದೆ. ಇದಕ್ಕೆ ಪರೋಕ್ಷವಾಗಿ ಕೇರಳ ರಾಜ್ಯದ ಕಮ್ಯುನಿಸ್ಟ್ ಸರ್ಕಾರ ಮರು ಪರಿ ಶೀಲನಾ ಅರ್ಜಿ ಸಲ್ಲಿಸಲು ಮುಂದಾಗದಿರು ವುದು ಖಂಡನೀಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು,ಸಂಘಟನೆ ಮೂಲಕ ಪ್ರತಿಭಟಿಸಬೇಕಾಗಿದೆ ಎಂದರು.

ನೆಲ್ಯಹುದಿಕೇರಿ ಬಿಂದು ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ಅಯ್ಯಪ್ಪ ಭಕ್ತರು ಮತ್ತು ಕೇರಳ ರಾಜ್ಯದ ಜನತೆಯ ಅಭಿಪ್ರಾಯ ಪಡೆಯದೆ ನೀಡಿರುವುದು ಸರಿಯಲ್ಲ. ಇದು ಸರ್ವ ಹಿಂದೂಗಳಿಗೆ ನೋವುಂಟು ಮಾಡಿದೆ ಎಂದರು.
ಈ ಸಂದರ್ಭ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಗ್ರಾಮ ಪಂಚಾಯಿತಿ ಸದಸ್ಯ ದೀಪಕ್, ಪ್ರಮು ಖರಾದ ಶಿವಶಂಕರ್, ಪುತ್ತಮ್ ಪ್ರದೀಪ್, ಕಿರಣ್ ಮಾದವ, ಅಪ್ಪು ಸುಬ್ರಮಣಿ, ಸದ ಶಿವನ್, ವಿಜು, ವಿಜೇಶ್, ಕಿರಣ್ ಮಾಧವನ್ ಮತ್ತು ಇತರರು ಇದ್ದರು.

ತೀರ್ಪು ವಿರೋಧಿಸಿ ಪಾಲಿಬೆಟ್ಟದಲ್ಲಿ ಅಯ್ಯಪ್ಪ ಭಕ್ತರು ಬರಿಕಾಲು ಮೆರವಣಿಗೆ ನಡೆಸಲಾ ಯಿತು. ಪಾಲಿಬೆಟ್ಟ ಗಣಪತಿ ದೇವಾಲಯದ ಸಮೀಪದಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಅಲ್ಲಿನ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡಿತು. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು.