ಕೌಟುಂಬಿಕ ಕಲಹ: ತಂದೆಯಿಂದಲೇ ಮಗನ ಹತ್ಯೆ

ಮಂಡ್ಯ:  ಕೌಟುಂಬಿಕ ಕಲಹದಿಂದ ತಂದೆಯೇ ಮಗನನ್ನು ಹತ್ಯೆ ಮಾಡಿ ಮನೆ ಮುಂದೆ ಬಿಸಾಡಿದ ಘಟನೆ ತಾಲೂಕಿನ ಕೋಣನಹಳ್ಳಿ ತಿಟ್ಟು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ವಾಸು(26), ತನ್ನ ತಂದೆ ಕೃಷ್ಣಪ್ಪ (56) ಅವರಿಂದ ಹತ್ಯೆಯಾದವನು.

ಘಟನೆ ಹಿನ್ನೆಲೆ: ಗ್ರಾಮದಲ್ಲಿ ಕೂಲಿ ಮಾಡಿ ಕೊಂಡು ಜೀವನ ನಿರ್ವಹಿಸುತ್ತಿದ್ದ ಕೃಷ್ಣಪ್ಪನಿಗೆ ಮಗ ವಾಸು ನಿತ್ಯವೂ ಮದ್ಯ ಸೇವನೆ ಮಾಡಿ ಬಂದು ಕಿರುಕುಳ ನೀಡುತ್ತಿದ್ದನಂತೆ. ಎಂದಿನಂತೆಯೇ ಮಂಗಳವಾರ ರಾತ್ರಿಯೂ ವಾಸು ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಕೃಷ್ಣಪ್ಪ ಮನೆಯಲ್ಲಿ ಇದ್ದ ಗುದ್ದಲಿ ಕಾವುವಿ ನಿಂದ ವಾಸು ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ವಾಗಿ ಗಾಯಗೊಂಡ ವಾಸು ಕುಸಿದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೇರೆಯವರಿಂದ ಮಗ ಮೃತಪಟ್ಟಿದ್ದಾನೆ ಎಂದು ಬಿಂಬಿಸುವ ಉದ್ದೇಶದಿಂದ ಕೃಷ್ಣಪ್ಪ ರಾತ್ರಿ 11ರ ಸುಮಾರಿನಲ್ಲಿ ಹಲ್ಲೆಯಿಂದ ಮೃತಪಟ್ಟಿದ್ದ ಮಗ ವಾಸುವಿನ ಮೃತ ದೇಹವನ್ನು ಮನೆ ಎದುರೇ ಬಿಸಾಡಿ ಮೌನವಾಗಿದ್ದ. ವಿಷಯ ತಿಳಿದು ಸ್ಥಳಕ್ಕಾಗ ಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರ ತಂಡ ಪರಿಶೀಲನೆ ನಡೆಸಿದಾಗ ಮನೆಯೊಳಗೆಲ್ಲಾ ರಕ್ತದ ಕಲೆ ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ತನ್ನ ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ಕೃಷ್ಣಪ್ಪ ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿ ಕೃಷ್ಣಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.