ಕಲ್ಲು ಮಿಶ್ರಿತ ಮರಳು ಸಾಗಾಣೆಗೆತ್ನಿಸಿದ  ಲಾರಿ ಚಾಲಕನಿಗೆ ರೈತರ ಗೂಸಾ ನಂಜನಗೂಡು ಬಳಿ ಅಳಗಂಚಿಪುರದಲ್ಲಿ ಘಟನೆ

ನಂಜನಗೂಡು:  ಅಕ್ರಮವಾಗಿ ಕಲ್ಲು ಮಿಶ್ರಿತ ಮರಳು ಸಾಗಾಣೆ ಮಾಡುತ್ತಿದ್ದ ಲಾರಿ ಚಾಲಕನನ್ನು ಹಿಡಿದು ರೈತರು ಗೂಸಾ ನೀಡಿರುವ ಘಟನೆ ನಂಜನಗೂಡು ತಾಲೂಕು ಅಳಗಂಚಿ ಪುರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಗ್ರಾಮದ ಬಳಿಯ ಕಬಿನಿ ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಕಲ್ಲು ಮಿಶ್ರಿತ ಮರಳನ್ನು ಸಾಗಿಸುವ ದಂಧೆ ನಡೆಯು ತ್ತಿತ್ತು. ಇಂದು ಬೆಳಿಗ್ಗೆ ಲಾರಿಯಲ್ಲಿ ಮರಳು ತುಂಬಿಕೊಂಡು ಸಾಗಿಸಲೆತ್ನಿದಾಗ ವಿದ್ಯಾಸಾಗರ್ ಎಂಬುವರ ನೇತೃತ್ವದಲ್ಲಿ ರೈತ ಮುಖಂಡರು ದಾಳಿ ನಡೆಸಿ, ಲಾರಿ ಚಾಲಕ ಚೆಲುವರಾಜು ಎಂಬುವನನ್ನು ಹಿಡಿದು ಥಳಿಸಿದರು. ಆ ವೇಳೆ ರೈತರ ವಿರುದ್ಧವೇ ತಿರುಗಿ ಬಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸ ತೊಡಗಿದ ಲಾರಿ ಚಾಲಕ ಪರಾರಿಯಾಗ ಲೆತ್ನಿಸಿದನಾದರೂ ಪ್ರಯೋಜನವಾಗಲಿಲ್ಲ.

ಈಗಾಗಲೇ ಹಲವು ಭಾರಿ ಮರಳು ತೆಗೆಯದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರಲ್ಲದೆ, ತಹಸೀಲ್ದಾರ್, ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತಾದರೂ, ಕಬಿನಿ ಬಲದಂಡೆ ನಾಲೆಯಲ್ಲಿ ಮರಳು ಸಾಗಣೆ ದಂಧೆ ಮುಂದುವರಿಯುತ್ತಿದ್ದ ಕಾರಣ ರೊಚ್ಚಿಗೆದ್ದ ರೈತರು ತಾವೇ ದಾಳಿ ನಡೆಸಿ ಲಾರಿ ಹಾಗೂ ಚಾಲಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಿಳಿಗೆರೆ ಠಾಣೆ ಪೊಲೀಸರು ಚಾಲಕ, ಲಾರಿ, 1 ಜೆಸಿಬಿಯನ್ನು ವಶಕ್ಕೆ ಪಡೆದರು.