ಸದ್ಯದಲ್ಲೇ ದಸರಾ ಉಪಸಮಿತಿ ರಚನೆ

ಮೈಸೂರು: ಅತೀ ಶೀಘ್ರ ಜನಪ್ರತಿನಿಧಿಗಳನ್ನೊಳಗೊಂಡ ದಸರಾ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ದಸರಾ ಸಿದ್ಧತಾ ಪೂರ್ವಭಾವಿ ಸಭೆ ನಡೆಸಿದ ಅವರು ಸುದ್ದಿ ಗಾರರಿಗೆ ಮಾಹಿತಿ ನೀಡಿದರು. ಈಗಾಗಲೇ ಅಧಿಕಾರಿಗಳನ್ನೊಳ ಗೊಂಡ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರೇತರ ಸದಸ್ಯರುಗಳನ್ನು ಶೀಘ್ರ ನೇಮಿಸಲಾಗುವುದು ಎಂದರು.

ಜನಪ್ರತಿನಿಧಿಗಳ ಹೆಸರು ಸೂಚಿಸಿ ಪಟ್ಟಿ ನೀಡುವಂತೆ ರಾಜಕೀಯ ಪಕ್ಷಗಳ ಜಿಲ್ಲಾ ಹಾಗೂ ನಗರ ಮುಖ್ಯಸ್ಥರಿಗೆ ಕೇಳಿಕೊಂಡಿದ್ದೇವೆ. ಇನ್ನೂ ಕೆಲವರು ಹೆಸರು ಕೊಟ್ಟಿಲ್ಲ. ಎಲ್ಲಾ ಬಂದ ಮೇಲೆ ಸಮಿತಿ ಗಳನ್ನು ರಚಿಸಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುವುದು ಎಂದರು.

ಈಗಾಗಲೇ ರಸ್ತೆಗಳ ಗುಂಡಿ ಮುಚ್ಚುವ ಹಾಗೂ ಕೆಲ ಮುಖ್ಯ ರಸ್ತೆಗಳ ಡಾಂಬರೀ ಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಗುಣಮಟ್ಟದ ಕೆಲಸ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ತಾವೂ ದಸರಾ ಕಾಮಗಾರಿಗಳನ್ನು ಖುದ್ದು ಪರಿಶೀಲಿಸುವ ಮೂಲಕ ಅಭಿವೃದ್ಧಿ, ಸ್ವಚ್ಛತೆ, ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸುವ ಬಗ್ಗೆ ಗಮನಹರಿಸುತ್ತೇನೆ ಎಂದು ಸಚಿವರು ನುಡಿದರು.