ವಂಚನೆ ಆರೋಪ; ಜಿಯೋ ಕಚೇರಿ ಮುಂದೆ ಪ್ರತಿಭಟನೆ

ಚಾಮರಾಜನಗರ: ಮೊಬೈಲ್ ಟವರ್ ನಿರ್ಮಿಸುವುದಾಗಿ ಹೇಳಿ ರೈತರೊಬ್ಬರ ಜಮೀನನ್ನು ಗುಂಡಿ ತೆಗೆದು ಹಾಳು ಮಾಡಲಾಗಿದೆ ಎಂದು ಆರೋಪಿಸಿ ರೈತರು ರಿಲಯನ್ಸ್ ಕಂಪನಿಯ ನಗರದ ಜಿಯೋ ಮುಖ್ಯ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಅಗ್ರಹಾರ ಬೀದಿಯಲ್ಲಿ ಇರುವ ಜಿಯೋ ಮುಖ್ಯ ಕಚೇರಿ ಮುಂದೆ ಜಮಾಯಿಸಿದ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಹಾಗೂ ರೈತರು, ರಿಲಯನ್ಸ್ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ತಾಲೂಕಿನ ಎಲಚಗಟ್ಟಿ ಮಾದಪ್ಪ ಎಂಬುವರ ಜಮೀನಿನಲ್ಲಿ ಮೊಬೈಲ್ ಟವರ್ ನಿರ್ಮಿಸುವುದಾಗಿ ಹೇಳಿ ರಿಲಯನ್ಸ್ ಕಂಪನಿಯು ಗುಂಡಿ ನಿರ್ಮಿಸಿದೆ. ಇದಲ್ಲದೇ ಮರಳು ಮತ್ತು ಜಲ್ಲಿಯನ್ನು ರಾಶಿ ಹಾಕುವ ಮೂಲಕ ಜಮೀನನ್ನು ಹಾಳುಗೆಡವು ಮಾಡಲಾಗಿದೆ. ಆದರೆ ಈಗ ಟವರನ್ನು ಬೇರೊಬ್ಬರ ಜಮೀನಿನಲ್ಲಿ ನಿರ್ಮಿಸಲಾಗುತ್ತಿದೆ. ಹೀಗಾಗಿ ಜಮೀನು ಹಾಳಾಗಿರುವ ರೈತ ಮಾದಪ್ಪ ಅವರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಯೋ ಮುಖ್ಯ ಕಚೇರಿಯ ಅಧಿಕಾರಿ, ಈ ಬಗ್ಗೆ ಮೂರು-ನಾಲ್ಕು ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.