ಹೊಗೆ ಮುಕ್ತ ದೇಶವನ್ನಾಗಿಸಲು ಉಚಿತ ಗ್ಯಾಸ್ ವಿತರಣೆ

ವಿರಾಜಪೇಟೆ: ದೇಶ ಅಭಿವೃದ್ಧಿ ಹೊಂದಲು ಹಾಗೂ ಹೊಗೆ ಮುಕ್ತ ದೇಶವನ್ನಾಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಿಂದ ದೇಶದ 16 ಕೋಟಿ ಬಡ ಕುಟುಂಬಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯಕ್ರಮವನ್ನು
ಹಮ್ಮಿಕೊಂಡಿರುವು ದಾಗಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕೇಂದ್ರ ಸರ್ಕಾರದ ಉಜ್ವಾಲ್ ಯೋಜನೆ ವತಿಯಿಂದ ವಿರಾಜಪೇಟೆ ಸಮೀಪದ ತೋರ ಗ್ರಾಮದ ಸಮು ದಾಯ ಭವನದಲ್ಲಿ ಆಯೋಜಿಸಲಾಗಿದ್ದ 24 ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಸುಭದ್ರ್ರಗೊಳಿಸಲು ಪ್ರತಿಯೊಬ್ಬ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು, ಇದನ್ನು ಪಡೆದುಕೊಂಡ ವರು ಏಜೆಂಟ್‍ಗಳಿಂದ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಜಾಗೃತಿಯಿಂದ ಬಳಸುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈ ಹಿಂದೆ ಹೆಗ್ಗಳ-ತೋರ ಗ್ರಾಮ ಕುಗ್ರಾಮವಾಗಿತ್ತು. ಕೆಲವು ವರ್ಷಗಳಿಂದ ರಸ್ತೆ, ಬಸ್ ಸೌಲಭ್ಯ ಹಾಗೂ ಸರಕಾರದ ಸೌಲಭ್ಯಗಳು ದೊರಕುತ್ತಿದ್ದು, ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಗ್ಯಾಸ್ ವಿತರಣೆಯಿಂದ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಮನು ರಾಮಚಂದ್ರ, ಜೋಕಿಂ ರಾಡ್ರಿಗಾಸ್, ಗ್ಯಾಸ್ ಏಜೆನ್ಸಿ ವಿಷ್ಣು, ಪಟ್ಟಣ ಪಂಚಾಯಿತಿ ಸದಸ್ಯ ಸುಭಾಶ್ ಮಹಾದೇವ, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ, ಬೋಪಣ್ಣ, ಸರಸ್ವತಿ, ಗ್ರಾಮಸ್ಥ ವಿಜಯ್ ಮುಂತಾದವರು ಉಪಸ್ಥಿತರಿದ್ದರು.